ಬಾಗೇಪಲ್ಲಿ: ‘ವಸತಿ ನಿಲಯದಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲ. ಈ ಕುರಿತು ನಿಲಯದ ಮೇಲ್ವಿಚಾರಕ ಚಿಕ್ಕಹನುಮಯ್ಯ ಅವರಿಗೆ ತಿಳಿಸಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪಟ್ಟಣದ ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿನಿಯರು ಶುಕ್ರವಾರ ಆರೋಪಿಸಿದರು.ವಸತಿ ನಿಲಯಕ್ಕೆ ಶುಕ್ರವಾರ ಭೇಟಿ ನೀಡಿದ ಇಲಾಖೆಯ ಜಿಲ್ಲಾ ನಿರ್ದೇಶಕ ಅಲ್ಲಾ ಬಕಾಷ್ ಅವರಿಗೆ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡ ವಿದ್ಯಾರ್ಥಿನಿಯರು, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ದೂರಿದರು.
ಮಧ್ಯರಾತ್ರಿಯಲ್ಲಿ ಕೆಲ ಕಿಡಿಗೇಡಿಗಳು ನಿಲಯದ ಕಿಟಕಿ ಬಾಗಿಲುಗಳಿಗೆ ಕಲ್ಲುಗಳನ್ನು ತೂರಿ ತೊಂದರೆ ನೀಡುತ್ತಾರೆ. ಅಸಭ್ಯವಾಗಿ ವರ್ತಿಸುತ್ತಾರೆ. ನಮಗೆ ಭದ್ರತೆ ನೀಡಬೇಕಾದ ಮೇಲ್ವಿಚಾರಕರು ಇದರ ಬಗ್ಗೆ ಗಮನಹರಿಸುವುದಿಲ್ಲ. ಸದಾ ಆತಂಕದಲ್ಲಿಯೇ ವಾಸಿಸಬೇಕಾದ ಸ್ಥಿತಿ ಇದೆ ಎಂದು ವಿದ್ಯಾರ್ಥಿನಿಯರು ಕಷ್ಟ ತೋಡಿಕೊಂಡರು.
ಸಮಸ್ಯೆ ಆಲಿಸಿದ ಅಲ್ಲಾ ಬಕಾಷ್ ಅವರು ತಾಲ್ಲೂಕಿನ ನಿಯೋಜಿತ ಬಿಸಿಎಂ ವಿಸ್ತರಣಾಧಿಕಾರಿ ಪೂಜಾರ್ ಮತ್ತು ಚಿಕ್ಕಹನುಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಸೂಕ್ತ ಕ್ರಮ: ಗುರುವಾರ ಕಲ್ಲು ತೂರಿದ ಕಿಡಿಗೇಡಿಗಳ ಬಗ್ಗೆ ತನಿಖೆ ನಡೆಸಲಾಗುವುದು. ಕರ್ತವ್ಯಲೋಪದ ಆರೋಪದ ಮೇಲೆ ನಿಲಯದ ಮೇಲ್ವಿಚಾರಕರಿಗೆ ನೋಟಿಸ್ ಜಾರಿಗೊಳಿಸಲಾಗುವುದು. ವಿದ್ಯಾರ್ಥಿನಿಯರಿಗೆ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ಕೋರಲಾಗುವುದು. ನಿಲಯಕ್ಕೆ ನೂತನ ಮೇಲ್ವಿಚಾರಕಿಯನ್ನು ನೇಮಿಸಲು ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ಮೂಲಸೌಕರ್ಯ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಇಲಾಖೆಯ ನಿರ್ದೇಶಕ ಅಲ್ಲಾಬಕಾಷ್ ‘ಪ್ರಜಾವಾಣಿ’ಗೆ ತಿಳಿಸಿದರು.