ಬಾಗೇಪಲ್ಲಿ ಬಯಲುಸೀಮೆ ಎಂಬ ಮಾತು ಜನಜನಿತ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಕೆಲ ಮನಮೋಹಕ ತಾಣಗಳು ಇಲ್ಲಿವೆ. ಅಂಥ ತಾಣಗಳಲ್ಲಿ ಬಾಗೇಪಲ್ಲಿಯಿಂದ ಸುಮಾರು 12 ಕಿ.ಮೀ.ಗಳಷ್ಟು ದೂರವಿರುವ ವೀರಾಪುರ ನಿರ್ದೇಶನ. ಇದು ಒಂದರ್ಥದಲ್ಲಿ ಅಘೋಷಿತ ಪಕ್ಷಿಧಾಮ.
ವರ್ಷಪೂರ್ತಿ ಇಲ್ಲಿ ಪಕ್ಷಿಗಳ ದಟ್ಟಣೆ ಕಾಣದಿದ್ದರೂ ಪ್ರತಿ ವರ್ಷ ಡಿಸೆಂಬರ್ನಿಂದ ಏಪ್ರಿಲ್ವರೆಗೆ ಪಕ್ಷಿಗಳ ಕಲರವ ಕೇಳಿ ಬರುತ್ತದೆ. ಪ್ರದೇಶದ ಸೊಗಸಿನ ಅನುಭವ ಪಡೆಯಲು ಮೊದಲು ಸಂಗಾತಿಗಳೊಂದಿಗೆ ಬರುವ ಪಕ್ಷಿಗಳು ನಂತರ ಗುಂಪುಗುಂಪಾಗಿ ಬರುತ್ತವೆ. ಕೆಲ ದಿನಗಳ ಮಟ್ಟಿಗೆ ಇಡೀ ವೀರಾಪುರ ಪ್ರದೇಶವನ್ನೇ ತಮ್ಮ ಆವಾಸಸ್ಥಾನ ಮಾಡಿಕೊಳ್ಳುತ್ತವೆ.
ಪೇಂಟೆಡ್, ಸ್ಟಾಕ್ಸರ್್, ಸ್ಟೂನ್ ಬಲ್ಸ್, ಬಲ್ಸ್ ಪಕ್ಷಿಗಳು ಮತ್ತು ವಿವಿಧ ಜಾತಿಯ ಕೊಕ್ಕರೆಗಳು ಸೈಬೇರಿಯಾ, ನೈಜಿರಿಯಾ, ದಕ್ಷಿಣ ಆಫ್ರಿಕಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಮರದ ರೆಂಬೆ, ಕೊಂಬೆ ಮತ್ತು ಪೊಟರೆಗಳಲ್ಲಿ ಗೂಡುಗಳನ್ನು ಕಟ್ಟಿಕೊಳ್ಳುವ ಪಕ್ಷಿಗಳು ಮೊಟ್ಟೆಗಳನ್ನು ಇಡುತ್ತವೆ ಎನ್ನುತ್ತಾರೆ ಪಕ್ಷಿತಜ್ಞರು.
ಆಂಧ್ರಪ್ರದೇಶದ ಗಡಿಭಾಗ ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕಿಗೂ ವೀರಾಪುರದ ಕೆಲವಷ್ಟು ಪ್ರದೇಶ ಸೇರುತ್ತದೆ. ಪ್ರದೇಶ ಎಷ್ಟೇ ದೂರವಾಗಿದ್ದರೂ ಪ್ರವಾಸಿಗರು ಪಕ್ಷಿಗಳನ್ನು ನೋಡಲೆಂದೇ ಇಲ್ಲಿ ಬರುತ್ತಾರೆ. ಛಾಯಾಗ್ರಾಹಕರ ದೊಡ್ಡ ದಂಡೆ ಇಲ್ಲಿ ನೆರೆದಿರುತ್ತದೆ. ಕೆರೆಗಳಲ್ಲಿ ಹನಿಹನಿಯಾಗಿ ನೀರು ಗುಟುಕರಿಸುವ ಮತ್ತು ಮೀನುಗಳನ್ನು ಹಿಡಿಯುವ ಪಕ್ಷಿಗಳನ್ನು ಛಾಯಾಗ್ರಾಹಕರು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುತ್ತಾರೆ.
ವೀರಾಪುರ ಪ್ರದೇಶದ ಸಂರಕ್ಷಣೆಗೆ ಮತ್ತು ಪಕ್ಷಿಗಳ ಆರೈಕೆಗೆಂದೇ ವೀರಾಪುರ ವೆಲ್ಫೇರ್ ಸೊಸೈಟಿ ಎಂಬ ಸಂಘವೊಂದನ್ನು ಹುಟ್ಟು ಹಾಕಿದ್ದೇವೆ. ಪಕ್ಷಿಗಳ ಹಿತದೃಷ್ಟಿಯಿಂದ ಪ್ರದೇಶವನ್ನು ಯಥಾರೀತಿ ನೈಸರ್ಗಿಕವಾಗಿ ಕಾಪಡಿಕೊಳ್ಳಲು ಶ್ರಮಿಸುತ್ತಿದ್ದೇವೆ. ಪಕ್ಷಿಗಳಿಗೆ ಗಾಯಗಳಾದಾಗ, ಅವುಗಳಿಗೆ ಚಿಕಿತ್ಸೆ ಕೊಡಿಸಲೆಂದೇ ಬೆಂಗಳೂರಿನಿಂದ ವೈದ್ಯರನ್ನು ಕರೆತರುತ್ತೇವೆ’ ಎಂದು ಸಂಘದ ಸಂಸ್ಥಾಪಕ ವೇಣುಗೋಪಾಲರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.