ಚಿಕ್ಕಮಗಳೂರು: ‘ಬೈರಾಪುರ ಪಿಕಪ್ನಿಂದ ಮಾದರಸನ ಕೆರೆಗೆ, ಹಿರೇಮಗಳೂರು ಕೆರೆಯಿಂದ ದಾಸರಹಳ್ಳಿ ಕೆರೆಗೆ ನೀರು ಹರಿಸುವ ಎರಡು ಏತ ನೀರಾವರಿ ಯೋಜನೆಗಳ ಕಾಮಗಾರಿ ಡಿಸೆಂಬರ್ ಹೊತ್ತಿಗೆ ಮುಗಿಯಲಿದೆ’ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಶುಕ್ರವಾರ ತಿಳಿಸಿದರು.
ನೀರಾವರಿ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ 20 ಕುಂಟೆ ಜಾಗ ಸ್ವಾಧೀನ ಸಮಸ್ಯೆ ಇದೆ. ಮೂರು ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ. ಒಂದು ಕಡೆ ರಸ್ತೆಗೆ ಪೈಪ್ಲೈನ್ ಅಳವಡಿಸಿ ರಸ್ತೆ ದುರಸ್ತಿ ಮಾಡಲು ತೀರ್ಮಾನಿಸಲಾಗಿದೆ’ ಎಂದರು.
ಕರಗಡ ನಾಲೆ ಯೋಜನೆಯಡಿ ಈಗಾಗಲೇ ಮೂರ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ನಾಲೆಯ ಬದಿಯ ಮಣ್ಣು ಕುಸಿದರೆ ದುರಸ್ತಿಗಾಗಿ ಸ್ವಲ್ಪ ಅನುದಾನ ಮೀಸಲು ಇಡಲಾಗಿದೆ ಎಂದು ತಿಳಿಸಿದರು. ನಾಲೆಯಲ್ಲಿ ಗುರುತ್ವದಲ್ಲಿ ಹರಿಯದಿರುವುದರಿಂದ ಪಂಪ್ ಮೂಲಕ ನಾಲೆಗೆ ಬಿಡಲಾಗುತ್ತಿದೆ. ಒಂದು ವೇಳೆ ನಾಲೆ ಬದಿಯ ಮಣ್ಣು ಕುಸಿದರೆ ನಾಲ್ಕೈದು ಕಿಲೋ ಮೀಟರ್ ಪೈಪ್ಲೈನ್ ನಿರ್ಮಿಸುವ ಯೋಚನೆ ಇದೆ. ಎಂಟು ತಿಂಗಳು ಅವಲೋಕನದ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.
‘ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಬಸವನಹಳ್ಳಿ ಕೆರೆ, ಕೋಟೆ ಕೆರೆ ಮತ್ತು ಹಿರೇಮಗಳೂರು ಕೆರೆ ಅಭಿವೃದ್ಧಿ ಹೆಸರಿನಲ್ಲಿ ಹಣ ದುರುಪಯೋಗವಾಗುತ್ತಿದೆ ಎಂದು ಅಧಿವೇಶನದಲ್ಲಿ ಹೇಳಿದ್ದರು. ಕೆರೆ ತಾಣಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ’ ಎಂದರು.
ಬಸವನಹಳ್ಳಿ ಕೆರೆ ಸುಂದರಗೊಳಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಮೀಸಲಿಡಲಾಗಿದೆ. ಸಂಪುಟ ಅನುಮೋದನೆ ಬಾಕಿ ಇದೆ. ಬಸವನಹಳ್ಳಿ ಕೆರೆ ಮತ್ತು ಕೋಟೆ ಕೆರೆ ಅಭಿವೃದ್ಧಿಗೆ ಇತ್ತೀಚಿನ ವರ್ಷಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ನೀಡಿಲ್ಲ ಎಂದು ಶಾಸಕ ರವಿ ತಿಳಿಸಿದರು.