ಚಿಕ್ಕಮಗಳೂರು: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸಿರಾಪುರದ ಸಾಯಿ ಏಂಜಲ್ಸ್ ಕಾಲೇಜಿನ ಎಂ.ಎಸ್.ಶರಣ್ಯಾ 594 (ಶೇ 99), ಕಲಾ ವಿಭಾಗದಲ್ಲಿ ನಗರದ ಬೇಲೂರು ರಸ್ತೆಯ ಸರ್ಕಾರಿ ಕಾಲೇಜಿನ ಎಸ್.ಎಸ್.ಜಸ್ವಂತ್, ಅಂತರಗಟ್ಟೆಯ ನಂದೀಶ್ವರ ಕಾಲೇಜಿನ ಕೆ.ಮಧು, ಚೌಳಹಿರಿಯೂರಿನ ಸರ್ಕಾರಿ ಕಾಲೇಜಿನ ಬಿ.ಕೆ.ಪೂಜಾ ಅವರು 570 (ಶೇ 95) ಹಾಗೂ ವಾಣಿಜ್ಯ ವಿಭಾಗದಲ್ಲಿ ಸೇಂಟ್ ಮೇರಿ ಪಿಯು ಕಾಲೇಜಿನ ಎಸ್.ಡಿ.ಸಾಗ್ನಿಕಾ, ಶಂಗೇರಿಯ ಜೆಸಿಬಿಎಂ ಕಾಲೇಜಿನ ಕೆ.ಆರ್.ನಕ್ಷಾ– 592 (ಶೇ 98.66) ಅಂಕ ಪಡೆದು ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿ ಶರಣ್ಯಾ ಅವರು ಶಿಕ್ಷಕ ಎಂ.ಯು.ಶಂಕರೇಗೌಡ, ಕೆ.ಆರ್.ಪರಿಮಳ ದಂಪತಿ ಪುತ್ರಿ. ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಜೀವವಿಜ್ಞಾನ ನಾಲ್ಕೂ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.
ವೈದ್ಯೆಯಾಗುವ ಕನಸು: ‘ಕಾಲೇಜಿನಲ್ಲಿ ಕೋಚಿಂಗ್ ಚೆನ್ನಾಗಿತ್ತು. ಹಿಂದಿನ ಎರಡು ವರ್ಷಗಳ ಪ್ರಶ್ನೆ ಪತ್ರಿಕೆ ಬಿಡಿಸಿದ್ದೆ. ರಾತ್ರಿ 12 ಗಂಟೆವರೆಗೆ ಓದುತ್ತಿದ್ದೆ. ಪಠ್ಯಪುಸ್ತಕಗಳನ್ನು ಅಭ್ಯಾಸ ಮಾಡಿ ವಿಷಯಗಳನ್ನು ಚೆನ್ನಾಗಿ ಮನದಟ್ಟುಮಾಡಿಕೊಳ್ಳುತ್ತಿದ್ದೆ. ವೈದ್ಯಕೀಯ ವಿಜ್ಞಾನ ಅಧ್ಯಯನ ಮಾಡುವ ಗುರಿ ಇದೆ’ ಎಂದು ಶರಣ್ಯಾ ಸಂತಸ ಹಂಚಿಕೊಂಡರು.
ವಿದ್ಯಾರ್ಥಿ ಎಸ್.ಎಸ್. ಜಸ್ವಂತ್ ಅವರು ವಳಗೇರಹಳ್ಳಿಯ ಸತೀಶ್ಕುಮಾರ್ ಮತ್ತು ಜ್ಯೋತಿ ದಂಪತಿ ಪುತ್ರ. ನಗರದ ಬೇಲೂರು ರಸ್ತೆಯ ಸರ್ಕಾರಿ ಪಿಯು ಕಾಲೇಜಿನ ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಪೊಲೀಸ್ ಅಧಿಕಾರಿಯಾಗುವ ಗುರಿ: ‘ಉಪನ್ಯಾಸಕರು ಚೆನ್ನಾಗಿ ಬೋಧನೆ ಮಾಡುತ್ತಿದ್ದರು. ನಿತ್ಯ ಐದಾರು ಗಂಟೆ ಓದುತ್ತಿದ್ದೆ. ಶಿಕ್ಷಕರು ಬಹಳಷ್ಟು ಪ್ರೋತ್ಸಾಹ ನೀಡಿದರು. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ್ದೆ. ಬಿ.ಎ ಪದವಿ ಸೇರುತ್ತೇನೆ. ಪೊಲೀಸ್ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ವಿದ್ಯಾರ್ಥಿ ಎಸ್.ಎಸ್.ಜಸ್ವಂತ್ ಖುಷಿ ಹಂಚಿಕೊಂಡರು.
ವಿದ್ಯಾರ್ಥಿನಿ ಎಸ್.ಡಿ.ಸಾಗ್ನಿಕಾ ಅವರು ಪಿ.ಎಸ್.ದೀಪಕ್ ಮತ್ತು ಪುಷ್ಪಾ ದೀಪಕ್ ದಂಪತಿ ಪುತ್ರಿ. ಈ ವಿದ್ಯಾರ್ಥಿನಿ ಸಂಖ್ಯಾಶಾಸ್ತ್ರ, ಲೆಕ್ಕಶಾಸ್ತ್ರ, ಗಣಕವಿಜ್ಞಾನ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.
ಸಂಗೀತ–ಗಾಯನದಲ್ಲಿ ಸಾಧನೆ ಗುರಿ: ‘ಚೆನ್ನಾಗಿ ಓದುತ್ತಿದ್ದೆ. ವಿಷಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತಿದ್ದೆ. ಇನ್ನು ಹೆಚ್ಚು ಅಂಕ ನಿರೀಕ್ಷಿಸಿದ್ದೆ. ಬಿ.ಕಾಂ ಸೇರುತ್ತೇವೆ. ಎಸಿಸಿಎ ಕೋರ್ಸ್ ಮಾಡುವ ಯೋಚನೆ ಇದೆ. ಸಂಗೀತ, ಗಾಯನದಲ್ಲಿ ಬಹಳ ಆಸಕ್ತಿ ಇದೆ. ಗಿಟಾರ್, ವೀಣೆ ಅಭ್ಯಾಸ ಮಾಡಿದ್ದೇನೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡುವ ಗುರಿ ಇದೆ’ ಎಂದು ಸಾಗ್ನಿಕಾ ಮನದಾಳ ಹಂಚಿಕೊಂಡರು.
ಸಾಯಿ ಏಂಜಲ್ಸ್ ಕಾಲೇಜು: ಸಿರಗಾಪುರದ ಸಾಯಿ ಏಂಜಲ್ಸ್ ಪಿಯು ಕಾಲೇಜು ವಾಣಿಜ್ಯ ವಿಭಾಗ ಶೇ 100 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿ ಎ.ಎಸ್.ಸ್ಪಂದನಾ 585 ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಎಂ.ಎಸ್.ಶರಣ್ಯಾ 594, ಆಂಡ್ರಿಯಾ ಸಿಯಾನವಾಸ್, ಮೇದಶ್ರೀ ಎಂ ಜೋಯಿಸ್ , ಕೆ.ವರ್ಷಿಣಿ 590, ಸಿ.ಎಂ.ಘಾನಶ್ರೀ, ಎ.ಎನ್.ಕನ್ನಿಕಾ, ಮಿಸಬ್ ಕುನೈನ್, ಎಚ್.ಆರ್.ಯಶಸ್ವಿನಿ– 587, ಅರ್ಜುನ್ ಕೆ ಪ್ರಸಾದ್, ಬಿ.ಎ.ಸುಜನ್ 585 ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದ 241 ವಿದ್ಯಾರ್ಥಿಗಳಲ್ಲಿ 116 ಅತ್ಯುನ್ನತಶ್ರೇಣಿ, 107 ಪ್ರಥಮ ಶ್ರೇಣಿ, 11 ದ್ವಿತೀಯ ಶ್ರೇಣಿ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.