ಆಲ್ದೂರು: ಸಮೀಪದ ಬೈಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಗರವಳ್ಳಿ ಮತ್ತು ಹೊಲದ ಬೈಲು ಗ್ರಾಮಗಳ ಸಹಭಾಗಿತ್ವದಲ್ಲಿ ಮಂಗಳವಾರ ಕಾಳಗದ ಹಬ್ಬದ ಜಾತ್ರಾ ಮಹೋತ್ಸವ ನಡೆಯಿತು.
ಕಾಳಗದ ಹಬ್ಬವು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಇದಕ್ಕೆ ಗ್ರಾಮ ದೇವತೆಗಳು ಯುದ್ಧಕ್ಕೆ ಹೊರಡುವ ಹಬ್ಬವೆಂತಲೂ ಕರೆಯಲಾಗುತ್ತದೆ. ಈ ಹಬ್ಬದ ನಂತರ ಹೊಲದಲ್ಲಿ ಬೆಳೆದ ಹೊಸ ಫಸಲಿನ ಸುಗ್ಗಿ ಹಬ್ಬದ ಆಚರಣೆಗೆ ಸಿದ್ಧತೆ ನಡೆಸುವುದು ವಾಡಿಕೆ ಎಂದು ಹೊಲದ ಬೈಲು ದಿಲೀಪ್ ಮಾಹಿತಿ ನೀಡಿದರು.
ಗ್ರಾಮ ದೇವತೆಗಳಾದ ನಾಲ್ಕೂ ರಮ್ಮ, ದೇವಿರಮ್ಮ, ಉದ್ದಂಡೇಶ್ವರ, ಕೆಂಚರಾಯ ಸ್ವಾಮಿ, ಉತ್ಸವ ಮೂರ್ತಿಗಳ ಪೂಜೆ, ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಗ್ರಾಮದ ಕುಟುಂಬದ ಹಬ್ಬವಾಗಿದ್ದು, ದೂರದ ಊರಿನಲ್ಲಿರುವ ಸದಸ್ಯರೆಲ್ಲರೂ ಒಟ್ಟು ಸೇರಿ ಆಚರಿಸುತ್ತಾರೆ.
ಮಕ್ಕಳಿಲ್ಲದ ಸ್ತ್ರೀಯರು ಹರಕೆ ಹೊತ್ತರೆ ಮಕ್ಕಳಾಗುವುದು ಮತ್ತು ಕಾಯಿಲೆಗಳು ವಾಸಿಯಾಗುತ್ತವೆ ಎನ್ನುವ ನಂಬಿಕೆ ಇದೆ.
ಧಾರ್ಮಿಕ ಆಚರಣೆಯ ಉಸ್ತುವಾರಿಯನ್ನು ಗ್ರಾಮಗಳ ಮುಖಂಡರಾದ ಉಮೇಶ್, ಎಚ್.ಕೆ. ಗೋಪಾಲಗೌಡ, ದಿಲೀಪ್ ಹೊಲದ ಬೈಲು, ದಿನೇಶ್ ಎಚ್.ಡಿ, ಧರ್ಮಚಾರು, ಎಚ್. ಎಸ್. ಮಂಜುನಾಥ ಶೆಟ್ರು ನೋಡಿಕೊಂಡರು.