ಚಿಕ್ಕಮಗಳೂರು: ನಗರದ ರಸ್ತೆಗಳ ಗುಂಡಿ ಮುಚ್ಚುವಂತೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ದೀಪಾ ನರ್ಸಿಂಗ್ ಹೋಂ ಬಳಿಯಿಂದ ಬೈಪಾಸ್ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿನ ದೊಡ್ಡಗುಂಡಿ ಬಳಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ವಿರುದ್ಧ ಘೋಷಣೆ ಕೂಗಿದರು.
ನಗರದ ಎಲ್ಲ ರಸ್ತೆಗಳು ಗುಂಡಿ, ಹೊಂಡಗಳಿಂದ ಕೂಡಿವೆ. ಮಳೆಯಿಂದಾಗಿ ಹೊಂಡಗಳಲ್ಲಿ ಕೆಸರು ನಿರ್ಮಾಣವಾಗಿದೆ. ಗುಂಡಿಗಳ ನಡುವೆ ರಸ್ತೆ ಹುಡುಕುವ ಪರಿಸ್ಥಿತಿ ಇದೆ. ವಾಹನ ಸವಾರರು ಸಂಚರಿಸಲು ಹೈರಾಣುಗುತ್ತಿದ್ದಾರೆ . ರಸ್ತೆ ದುರಸ್ತಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ದಂಟರಮಕ್ಕಿಯ ಬಳಿ ರಸ್ತೆಯ ಗುಂಡಿಗೆ ಇತ್ತೀಚೆಗೆ ಆಯತಪ್ಪಿ ಬಿದ್ದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟಿದ್ದರು. ಅದನ್ನು ಖಂಡಿಸಿ ವಿವಿಧ ಪಕ್ಷ, ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದರೂ ಜಿಲ್ಲಾಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ರಸ್ತೆ ದುರಸ್ತಿಗೆ ಕ್ರಮ ವಹಿಸಿಲ್ಲ. ಉಪಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ದೂಷಿಸಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಕ್ಷೇತ್ರದ ಜನರ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕು. ರಸ್ತೆ ದುರಸ್ತಿಗೆ ತುರ್ತಾಗಿ ಕ್ರಮ ವಹಿಸಬೇಕು ಎಂದರು.
ಪಕ್ಷದ ಮುಖಂಡರಾದ ಎ.ಎನ್.ಮಹೇಶ್, ಜಂಶಿದ್, ಹಿರೇಮಗಳೂರು ರಾಮಚಂದ್ರ, ಶಿವಕುಮಾರ್, ರಸೂಲ್ ಖಾನ್, ರಾಮಣ್ಣ, ಪ್ರಾಸಾದ್ ಅಮೀನ್, ಸುರೇಖಾ ಸಂಪತ್, ವಿನಾಯಕ್ ರೈ ಇದ್ದರು.