ಚಿಕ್ಕಮಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ.
ಜಾರ್ಜ್ ಅವರು ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಲ್ಲೊಬ್ಬರು. ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ– ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ– ತಂತ್ರಜ್ಞಾನ ಖಾತೆ ನಿರ್ವಹಿಸುತ್ತಿದ್ದಾರೆ.
ಸಂಪುಟದಲ್ಲಿ ಜಿಲ್ಲೆಯ ಯಾರೂ ಸಚಿವರು ಇಲ್ಲ. ಹೀಗಾಗಿ ಜಿಲ್ಲೆಯ ಉಸ್ತುವಾರಿಯನ್ನು ಅನಿವಾರ್ಯವಾಗಿ ಬೇರೆ ಜಿಲ್ಲೆಯವರಿಗೆ ವಹಿಸಲಾಗಿದೆ.
‘ಕಾಂಗ್ರೆಸ್ ಪಕ್ಷದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹೊಣೆ ವಹಿಸುವಂತೆ ಕಾಂಗ್ರೆಸ್ ಜಿಲ್ಲಾ ಸಮಿತಿ ವತಿಯಿಂದ ಮನವಿ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಒತ್ತಡವನ್ನೂ ಹೇರಲಾಗಿತ್ತು. ಮನವಿ ಫಲಿಸಿದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಾರ್ಜ್ ಅವರಿಗೆ ಹಲವಾರು ಖಾತೆಗಳನ್ನು ನಿರ್ವಹಿಸಿದ ಅನುಭವ ಇದೆ. ಅವರು ರಾಜಕೀ ಯದಲ್ಲೂ ಪಳಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದಾರೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.
ಜೆಡಿಎಸ್ನಿಂದಲೂ ಆ ಪಕ್ಷದ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡುವಂತೆ ಒತ್ತಾಯ ಇತ್ತು. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಗೆ ಹೊಣೆ ಸಿಗಲಿದೆ ಎಂದು ಕೆಲ ಜೆಡಿಎಸ್ ಮುಖಂಡರು ಹೇಳಿದ್ದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಈ ಜಿಲ್ಲೆಯನ್ನು ಅನ್ಯ ಜಿಲ್ಲೆಯವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಭಾಯಿಸಿದ್ದಾರೆ. ಅಭಯ್ಚಂದ್ರ ಜೈನ್, ಡಾ.ಜಿ.ಪರಮೇಶ್ವರ, ಆರ್.ರೋಷನ್ ಬೇಗ್ ಅವರು ಹೊಣೆ ನಿರ್ವಹಿಸಿದ್ದರು.