ಕಡೂರು: ಗ್ರಾಮೀಣ ರಸ್ತೆಗಳಿಗೆ ಆದ್ಯತೆ ನೀಡಲಾಗಿದ್ದು ಕ್ಷೇತ್ರದ ಸುಮಾರು 182 ಕಿ.ಮೀ ಗ್ರಾಮೀಣ ರಸ್ತೆಗಳು ಮೇಲ್ದರ್ಜೆಗೇರಿವೆ ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ವೈ.ಮಲ್ಲಾಪುರ ಗ್ರಾಮದಲ್ಲಿ ಶುಕ್ರವಾರ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಹಲವಾರು ವರ್ಷಗಳಿಂದ ದುರಸ್ತಿಯಾಗದೆ ಹಾಳಾಗಿದ್ದ ರಸ್ತೆಗಳು ಸುಸಜ್ಜಿತಗೊಂಡಿವೆ. ರಸ್ತೆಗಳು ಮತ್ತು ತಾಲ್ಲೂಕಿಗೆ ಶಾಶ್ವತ ನೀರಾವರಿ ನನ್ನ ಆದ್ಯತೆಯಾಗಿತ್ತು. ಭದ್ರಾ ಉಪಕಣಿವೆ ಯೋಜನೆಗೆ ₹1,281 ಕೋಟಿ ಹಣವನ್ನು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಲಧಾರೆ ಯೋಜನೆಗೆ ₹1,800 ಕೋಟಿ ನೀಡಿದ್ದು, ಇದರಲ್ಲಿ ₹1,100 ಕೋಟಿ ಕಡೂರು ಕ್ಷೇತ್ರಕ್ಕೆ ಮೀಸಲಾಗಿದೆ’ ಎಂದರು.
ವೈ.ಮಲ್ಲಾಪುರ ಗ್ರಾಮಕ್ಕೆ ಅನೇಕ ಸೌಲಭ್ಯಗಳನ್ನು ನೀಡಿದ್ದು, ಪ್ರಸ್ತುತ ₹ 3.25 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯಳ್ಳಂಬಳಸೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಗೆ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶಶಿರೇಖಾ ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದೊರೆಸ್ವಾಮಿ ಮಹೇಶ್, ಬೀರೂರು ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್, ಮಾರ್ಗದಮಧು, ಮಲ್ಲಿದೇವಿಹಳ್ಳಿ ಸತೀಶ್, ಕೆ.ಎನ್.ಬೊಮ್ಮಣ್ಣ, ಬಿ.ಪಿ.ದೇವಾನಂದ್, ಎಚ್.ಎಂ.ರೇವಣ್ಣಯ್ಯ, ಟಿ.ಆರ್.ಲಕ್ಕಪ್ಪ, ರಾಜ ನಾಯ್ಕ ಇದ್ದರು.