ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ | ಆಮ್ಲಜನಕ ಘಟಕ: ‘ಆರಂಭ’ಕ್ಕೆ ವಿಘ್ನ

ನರಸಿಂಹರಾಜಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ: ವೋಲ್ಟೆಜ್ ಸಮಸ್ಯೆಯೂ ತೀವ್ರ
Published 14 ಮಾರ್ಚ್ 2024, 6:43 IST
Last Updated 14 ಮಾರ್ಚ್ 2024, 6:43 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಆಮ್ಲಜನಕ ಉತ್ಪಾದನಾ ಘಟಕದ ಕಾಮಗಾರಿ ಆರಂಭವಾಗಿದ್ದು ಇದುವರೆಗೂ ಘಟಕ ಕಾರ್ಯಾರಂಭ ಮಾಡಿಲ್ಲ.

ಕೋವಿಡ್‌ ಬಾಧಿಸಿದವರಿಗೆ ಆಮ್ಲಜನಕದ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ 2021ರಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸುವ ಯೋಜನೆ ಆರಂಭವಾಗಿತ್ತು. ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಆರ್‌ಎಸ್ ಅನುದಾನದಲ್ಲಿ ಕೇಂದ್ರ ಸರ್ಕಾರದ ₹1 ಕೋಟಿ ವೆಚ್ಚದಲ್ಲಿ 500ಎಲ್‌ಪಿಎಂ ಸಾಮರ್ಥ್ಯದ ಪಿಎಸ್‌ಎ ಉತ್ಪಾದನಾ ಘಟಕ (Pressure swing adsorption Oxyen plant -PSA) ಹಾಗೂ ರಾಜ್ಯ ಸರ್ಕಾರದ ₹ 30 ಲಕ್ಷ ಅನುದಾನದಲ್ಲಿ ಶುದ್ಧ ಆಮ್ಲಜನಕ ಉತ್ಪಾದಿಸುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ (Liquid medical oxygen-LMO) ಸ್ಥಾಪಿಸಲು ಮುಂದಾಯಿತು.

ಆಮ್ಲಜನಕ ಉತ್ಪಾದನಾ ಘಟಕಕ್ಕೆ ಬೇಕಾಗುವ 250 ಕೆ.ವಿ.ಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕ–ಜನರೇಟ್, ಆಮ್ಲಜನಕ ಉತ್ಪಾದನಾ ಘಟಕದಿಂದ ತೀವ್ರ ನಿಗಾ ಘಟಕಕ್ಕೆ ಕೊಳವೆ ಅಳವಡಿಕೆ, ವಿದ್ಯುದೀಕರಣ ಸೇರಿ ಸಿಎಸ್‌ಆರ್ ಅನುದಾನದಿಂದ ₹90 ಲಕ್ಷದ ಟೆಂಡರ್‌ ನೀಡಲಾಗಿತ್ತು.

ವಿದ್ಯುತ್ ಪರಿವರ್ತಕ ತಂದಿಟ್ಟು ಒಂದು ವರ್ಷವಾಗಿದ್ದು, ಗುತ್ತಿಗೆದಾರರು ಅದಕ್ಕೆ ವಿದ್ಯುತ್ ಸಂಪರ್ಕ ಕೊಡಿಸುವ ಕೆಲಸ ಮಾಡದೆ ಇರುವುದರಿಂದ ಅದು ತುಕ್ಕು ಹಿಡಿಯುವ ಸ್ಥಿತಿ ತಲುಪಿದೆ. ಆಮ್ಲಜನಕ ಉತ್ಪಾದನಾ ಘಟಕದಿಂದ ಐಸಿಯು ಹಾಗೂ ರೋಗಿಗಳ ಬೆಡ್‌ಗೆ ಆಮ್ಲಜನಕ ಪೂರೈಸಲು ಅಳವಡಿಸಿರುವ ಕೊಳವೆ ಕಾಮಗಾರಿ ಕಳಪೆಯಾಗಿದ್ದು ಸೋರಿಕೆ ಇದೆ ಎಂಬ ಆರೋಪ ಕೇಳಿಬಂದಿದೆ.

ಆಮ್ಲಜನಕ ಉತ್ಪಾದನಾ ಘಟಕದ ಕಾಮಗಾರಿ ಬಹುತೇಕ ಮುಗಿದಿದ್ದರೂ 250 ಕೆ.ವಿ.ಎ ಸಾಮರ್ಥ್ಯ ವಿದ್ಯುತ್ ಪರಿವರ್ತಕ ಅಳವಡಿಸದಿರುವುದರಿಂದ ಆಮ್ಲಜನಕ ಉತ್ಪಾದನೆಯಾಗದೇ ಹಣ ಪಾವತಿಸಿ ಬೇರೆ ಕಡೆಯಿಂದ ಸಿಲಿಂಡರ್ ತುಂಬಿಸಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.

ಆಸ್ಪತ್ರೆಗೆ ಬೇಕಾಗಿರುವ ವಿದ್ಯುತ್ ಪರಿವರ್ತಕ ಅಳವಡಿಸದೆ ಇರುವುದರಿಂದ ಎಕ್ಸ್‌ರೇ, ಆಪರೇಷನ್ ಥಿಯೇಟರ್, ಡಯಾಲಿಸಿಸ್ ಕೇಂದ್ರದಲ್ಲಿ ವೋಲ್ಟೆಜ್ ಸಮಸ್ಯೆಯೂ ಇದೆ.

ನರಸಿಂಹರಾಜಪುರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಳವಡಿಸಿರುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಘಟಕ
ನರಸಿಂಹರಾಜಪುರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಳವಡಿಸಿರುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಘಟಕ
ಆಮ್ಲಜನಕ ಘಟಕಕ್ಕೆ ವಿದ್ಯುತ್ ಪೂರೈಸಲು ಅಳವಡಿಸಿರುವ ಪರಿವರ್ತಕ
ಆಮ್ಲಜನಕ ಘಟಕಕ್ಕೆ ವಿದ್ಯುತ್ ಪೂರೈಸಲು ಅಳವಡಿಸಿರುವ ಪರಿವರ್ತಕ

2021ರಲ್ಲಿ ಆರಂಭವಾದ ಕಾಮಗಾರಿ ಸಿಆರ್‌ಎಸ್ ಅನುದಾನದಲ್ಲಿ ನಿರ್ಮಾಣ ವಿದ್ಯುತ್ ಪರಿವರ್ತಕ ಅಳವಡಿಸದ ಗುತ್ತಿಗೆದಾರರು

ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿದರೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.

-ಗೌತಮ್ ಮೆಸ್ಕಾಂ ಎಂಜಿನಿಯರ್

ಕಾಮಗಾರಿ ಪೂರ್ಣಗೊಳಿಸಿ ಆಮ್ಲಜನಕ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಲು ಕ್ರಮಕೈಗೊಳ್ಳಲಾಗುವುದು.

-ಟಿ.ಡಿ.ರಾಜೇಗೌಡ ಶಾಸಕ

ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಪತ್ರ

ಆಮ್ಲಜನಕ ಉತ್ಪಾದನಾ ಘಟಕಕ್ಕೆ ವಿದ್ಯುತ್ ಪರಿವರ್ತಕ ಅಳವಡಿಸದಿರುವುದರಿಂದ ಆಸ್ಪತ್ರೆಗೆ ಅವಶ್ಯಕವಾಗಿರುವ ಜಂಬೋ ಮತ್ತು ಸಣ್ಣ ಒಟ್ಟು 160 ಆಮ್ಲಜನಕ ಸಿಲಿಂಡರ್‌ಗಳನ್ನು ಶಿವಮೊಗ್ಗ ಭದ್ರಾವತಿಯಿಂದ ತುಂಬಿಸಿಕೊಂಡು ಬರುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಪತ್ರ ಬರೆಯಲಿದೆ. ಈವರೆಗೂ ಯಾವುದೇ ಘಟಕವನ್ನು ಆಸ್ಪತ್ರೆಗೆ ಹಸ್ತಾಂತರ ಮಾಡಿಕೊಂಡಿಲ್ಲ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಿಜಯಕುಮಾರ್ ತಿಳಿಸಿದರು.

ಸರ್ಕಾರದ ಬೊಕ್ಕಸಕ್ಕೆ ನಷ್ಟ

ಕೋವಿಡ್ ಸಮಯದಲ್ಲಿ ಆಮ್ಲಜನಕ ದೊರೆಯದೇ ಸಾಕಷ್ಟು ಸಾವು–ನೋವುಗಳಾಗಿದ್ದು ಇಂತಹ ಅನಾಹುತ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪಿಸಿದೆ. ಇದನ್ನು ಕಾರ್ಯಾರಂಭ ಮಾಡದೆ ಇರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದ್ದು ಶೀಘ್ರ ಘಟಕವನ್ನು ಆರಂಭಿಸಬೇಕು ಎಂದು ಅಳಲಗೆರೆ ಗ್ರಾಮಸ್ಥ ಎ.ಇ.ಚೆರಿಯನ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT