ತುಮಕೂರು: ‘ಪರಮಾತ್ಮನ ಮಹಿಮೆ ತಿಳಿಯುವ ಶಕ್ತಿ ಮನುಷ್ಯನಿಗೆ ಮಾತ್ರ ಇದೆ. ಆದರೆ, ಈಗ ಮನುಷ್ಯ ಪಶುಗಳಿಗಿಂತ ಕಡೆಯಾಗುತ್ತಿದ್ದಾನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಕ್ಷಸ ಪ್ರಭುತ್ವ ಕಾಣುತ್ತಿದ್ದೇವೆ’ ಎಂದು ಪೇಜಾವರಮಠದ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಕನ್ಯಕಾ ಪರಮೇಶ್ವರಿ ದೇವಸ್ಥಾನ ಮತ್ತು ವಾಸವಿ ಸಂಘ ಆಶ್ರಯದಲ್ಲಿ ಏರ್ಪಡಿಸಿದ್ದ ಸಾವಿರ ದಿನಗಳ ಸತ್ಸಂಗ ಕಾರ್ಯಕ್ರಮ ಸಾವಿರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ಭಗವಂತನ ಧ್ಯಾನ ಮಾಡಿ ಭಕ್ತಿಯಿಂದ ನಡೆದುಕೊಳ್ಳಬೇಕು. ಈ ಹಾದಿಯಲ್ಲಿ ನಡೆಯುವವರು ಯಾವ ಕೆಟ್ಟ ಕೆಲಸಗಳನ್ನೂ ಮಾಡಲು ಸಾಧ್ಯವಿಲ್ಲ. ಆದರೆ, ಈಗ ಭಗವಂತನ ಸ್ಮರಣೆ ಮಾಡಲು ಮನುಷ್ಯನಿಗೆ ಬಿಡುವಿಲ್ಲ ಎಂದು ಹೇಳಿದರು.
ಮಧ್ವಾಚಾರ್ಯರು ಕರ್ತವ್ಯ ಮಾಡಿ ಭೋಗ ಅನುಭವಿಸು ಎಂದೇ ಹೇಳಿದ್ದಾರೆ. ಆದರೆ, ವಾಸ್ತವಿಕದಲ್ಲಿ ಕರ್ತವ್ಯ ಬೇಡ. ಭೋಗ ಜೀವನ ಮಾತ್ರ ಬೇಕು ಎಂಬ ಧೋರಣೆಯಲ್ಲಿ ಮನುಷ್ಯರು ಸಾಗುತ್ತಿದ್ದಾರೆ ಎಂದು ಹೇಳಿದರು.
ಕರ್ತವ್ಯ ಮಾಡುವಾಗಲೂ ನಾವು ಪರಮಾತ್ಮನನ್ನು ಮರೆಯಬಾರದು. ಭಗವಂತನ ಭಯವಿಲ್ಲದೇ ಮಾಡುವ ಕಾರ್ಯ ಕೆಟ್ಟ ದಾರಿಯತ್ತ ಕೊಂಡೊಯ್ಯುತ್ತದೆ. ರಾಷ್ಟ್ರದ ಕಾನೂನು ಪಾಲಿಸುವವ ರಾಷ್ಟ್ರ ಭಕ್ತ. ದೇವರ ಕಾನೂನು ಪಾಲಿಸುವವರು ದೇವರ ಭಕ್ತರು ಎಂದು ತಿಳಿಸಿದರು.
ವಾಸವಿ ಸಂಘದ ಅಧ್ಯಕ್ಷ ಆರ್.ಎಲ್.ರಮೇಶ್ಬಾಬು, ಹರಿದಾಸ ಆಕಡೆಮಿ ಅಧ್ಯಕ್ಷ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್, ಶಶಿಕುಮಾರ್, ಗೋವಿಂದರಾಜು ಇದ್ದರು.