ಚಿಕ್ಕಮಗಳೂರು: ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಸಣ್ಣ ನೀರಾವರಿ ಸಚಿವ ಸಿ.ಪಿ. ಯೋಗೇಶ್ವರ್, ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಭೇಟಿಯಾಗಿ ಚರ್ಚಿಸಿದ್ದಾರೆ.
ನಗರದ ಹೊರ ವಲಯದ ಸೆರಾಯ್ ಹೋಟೆಲ್ನಲ್ಲಿ ಶನಿವಾರ ಬೆಳಿಗ್ಗೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರೂ ಇದ್ದರು.
ರಮೇಶ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನೀರಾವರಿ ಯೋಜನೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಬೇರೆ ವಿಶೇಷ ಏನು ಇಲ್ಲ’ ಎಂದು ಪತ್ರಿಕ್ರಿಯಿಸಿದರು.
‘ಕಡಹಿನ ಬೈಲು ಏತ ನೀರಾವರಿ ಯೋಜನೆ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಬೇಕು, ಪೈಪ್ಲೈನ್ ವಿಸ್ತರಣೆಗೆ ಕ್ರಮ ವಹಿಸಬೇಕು ಎಂದು ಸಣ್ಣ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದೆ. ಬೇರೆ ಯಾವ ವಿಚಾರ ಚರ್ಚಿಸಿಲ್ಲ’ ಎಂದು ಶಾಸಕ ಟಿ.ಡಿ.ರಾಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯ ಮಳಲೂರು ಏತ ನೀರಾವರಿ ಯೋಜನೆ ಶುರುವಾಗಿ ಒಂಬತ್ತು ವರ್ಷವಾಗಿದೆ, ಇನ್ನು ಮುಗಿದಿಲ್ಲ. ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಜಲ ಸಂಪನ್ಮೂಲ ಸಚಿವರಿಗೆ ಮನವಿ ಮಾಡಿದೆ. ರಾಜಕೀಯ ವಿಚಾರ ಪ್ರಸ್ತಾಪವಾಗಿಲ್ಲ’ ಎಂದು ಶಾಸಕ ಕುಮಾರಸ್ವಾಮಿ ತಿಳಿಸಿದರು.