ಚಿಕ್ಕಮಗಳೂರು: ‘ಫಲವತ್ತಾದ ಮಣ್ಣು ಇಲ್ಲದಿದ್ದರೆ ಏನನ್ನೂ ಬೆಳೆಯಲು ಸಾಧ್ಯ ಇಲ್ಲ. ಮಣ್ಣು ಇಲ್ಲದೆ ಬದುಕು ಇಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು’ ಎಂದು ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದ ಪ್ರಾಚಾರ್ಯ ಡಾ.ಸಿ.ಟಿ.ಜಯದೇವ ಹೇಳಿದರು.
ಈಶ ಫೌಂಡೇಷನ್ ವತಿಯಿಂದ ‘ಮಣ್ಣು ಉಳಿಸಿ ಅಭಿಯಾನ’ ಅಂಗವಾಗಿ ನಗರದ ಎಐಟಿ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಮಣ್ಣಿಗಾಗಿ ಸವಾರಿ ಮತ್ತು ಸಂಗೀತ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಮಣ್ಣಿನಲ್ಲಿ ಸಾವಯವ ಅಂಶಗಳು ಇವೆ. ರಾಸಾಯನಿಕಗಳಿಂದಾಗಿ ಮಣ್ಣಿನ ಫಲವತ್ತತೆ ನಶಿಸುತ್ತಿದೆ. ಮಣ್ಣಿನ ರಕ್ಷಣೆ ಎಲ್ಲರ ಹೊಣೆ’ ಎಂದು ಹೇಳಿದರು.
‘ಮಣ್ಣಿನಲ್ಲಿ ಫಲವತ್ತತೆ ಇಲ್ಲದಿದ್ದರೆ ಬೆಳೆ ಇಳುವರಿ ಕಡಿಮೆಯಾಗುತ್ತದೆ. ರಸಾಯನಿಕ ಬಳಕೆ ಕಡಿಮೆ ಮಾಡಬೇಕು. ಮಣ್ಣನ್ನು ರಕ್ಷಿಸಲು ಸರ್ಕಾರವು ಗಮನಹರಿಸಬೇಕು’ ಎಂದರು.
ಗಾಯಕರಾದ ಎಂ.ಜೀ ಮತ್ತು ಗುಬ್ಬಿ ಅವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೂ ಮುನ್ನಾ ನಗರದ ಹನುಮಂತಪ್ಪ ವೃತ್ತದಿಂದ ಎಐಟಿ ಕಾಲೇಜುವರೆಗೆ ಬೈಕ್ ಜಾಥಾ ನಡೆಯಿತು. ಪಲ್ಲವಿ ರವಿ ಜಾಥಕ್ಕೆ ಚಾಲನೆ ನೀಡಿದರು. ಸವಾರರು ದಾರಿಯುದ್ದಕ್ಕೂ ‘ಮಣ್ಣು ಉಳಿಸಿ’, ‘ನೀರು ಉಳಿಸಿ’ ಘೋಷಣೆಗಳನ್ನು ಕೂಗಿದರು.