ಶೃಂಗೇರಿ: ಅತಿವೃಷ್ಟಿಯಿಂದ ಕಾಫಿ, ಅಡಿಕೆ, ಏಲಕ್ಕಿ, ಭತ್ತ, ಕಾಳುಮೆಣಸು ಬೆಳೆಗಳಿಗೆ ರೋಗ ತಗುಲಿ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಸರ್ಕಾರವನ್ನು ಒತ್ತಾಯಿಸಿದರು.
ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಲು ಒತ್ತಾಯಿಸಿ ತಹಶೀಲ್ದಾರ್ ಮೂಲಕತಾಲ್ಲೂಕು ರೈತ ಸಂಘದಿಂದ ಮನವಿ ಸಲ್ಲಿಸಿ ಅವರು ಮಾತನಾಡಿದರು.
‘ವಾಡಿಕೆಗಿಂತಲೂ ಅಧಿಕ ಮಳೆಯಾಗಿ ಬೆಳೆಗಳು ಹಾನಿಯಾಗಿವೆ. ಕೂಡಲೇ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಬೆಳೆ ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಪರಿಹಾರವನ್ನು ಕೊಡಿಸಿಕೊಡಬೇಕು. ಶೃಂಗೇರಿ ತಾಲ್ಲೂ ಕನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಣೆ ಮಾಡಬೇಕು’ಎಂದುಆಗ್ರಹಿಸಿದರು.
ಸರ್ಕಾರ ಯೋಜನೆಯನ್ನು ಜಾರಿಗೆ ತರುವಾಗ ಫಲಾನುಭವಿಗಳ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಯೋಜನೆಗಳ ಫಲಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಸಂತ್ರಸ್ತರ ಬದುಕಿಗೆ ಮಾರಕವಾಗುವಂತಹ ಸಮಸ್ಯೆಗಳನ್ನು ತಂದೊಡ್ಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಸಂಚಾಲಕ ಕೆಲವಳ್ಳಿ ಗುಂಡಪ್ಪ ಮಾತನಾಡಿ, ಅವೈಜ್ಞಾನಿಕವಾಗಿ ತಯಾರಿಸಿದ ಕಸ್ತೂರಿರಂಗನ್ ವರದಿಯನ್ನು ಜಾರಿಗೆ ತಂದರೆ ಪಶ್ಚಿಮಘಟ್ಟದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರ ಬದುಕು ಅತಂತ್ರವಾಗುತ್ತದೆ. ಆದರಿಂದ ಕಸ್ತೂರಿರಂಗನ್ ವರದಿ ಅನುಷ್ಠಾನವನ್ನು ಕೂಡಲೇ ರದ್ದುಗೊಳಿಸಬೇಕು ಎಂದರು.
ಕಾರ್ಯದರ್ಶಿ ಪೂರ್ಣೇಶ್, ಚೆನ್ನಕೇಶವ ಮೆಣಸೆ, ಶ್ರೀನಿವಾಸ, ಯೋಗಪ್ಪ ಯಡದಳ್ಳಿ, ಚಂದ್ರಪ್ಪ ತೆಕ್ಕೂರು, ನಾಗೇಶ್ ಕಲ್ಲಾಳ್ಳಿ, ಕೀರ್ತಿ, ಯೋಗಪ್ಪ ಕರ್ಕುಳಿ, ಕೆ.ಟಿ. ಮಂಜುನಾಥ್ ಇದ್ದರು.