ಶೃಂಗೇರಿ: ತಾಲ್ಲೂಕಿನ ಕೂತುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ವೈಕುಂಠಪುರದ ನಿವಾಸಿ ಶ್ರೇಯಸ್ ಎಂಬುವರು ಅಣಬೆ ಬೇಸಾಯದಲ್ಲಿ ತೊಡಗಿಕೊಂಡು ಲಾಭ ಗಳಿಸುತ್ತಿದ್ದಾರೆ.
ಮಲೆನಾಡಿನಲ್ಲಿ ಕೋಳಿ, ಜೇನು ಸಾಕಾಣಿಕೆ, ಹಂದಿಶೇಡ್, ತರಕಾರಿ ಬೆಳೆ ಇತ್ಯಾದಿ ಮಾಡುವವರು ಇದ್ದರೂ, ಅಣಬೆ ಬೇಸಾಯ ಮಾಡುವವರ ಸಂಖ್ಯೆ ವಿರಳ. ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಳ ಇಳುವರಿ ವ್ಯತ್ಯಾಸವಾದಾಗ ಲಾಭ-ನಷ್ಟಗಳ ಲೆಕ್ಕಾಚಾರ ನಡೆಯುತ್ತದೆ. ಉಪ ಕಸಬುಗಳತ್ತ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ರೀತಿ ಉಪ ಕಸುಬು ಅರಸಿ, ಅಣಬೆ ಬೇಸಾಯ ಮಾಡಿ ಶ್ರೇಯಸ್ ಯಶಸ್ಸು
ಕಂಡಿದ್ದಾರೆ.
‘ಆನ್ಲೈನ್ನಲ್ಲಿ ಅಣಬೆ ಬೇಸಾಯದ ಬಗ್ಗೆ ತಿಳಿದುಕೊಂಡೆ. ಮೈಸೂರು ಪ್ರಯೋಗಾಲಯದಿಂದ ಬಿತ್ತನೆ ಬೀಜ ತರಿಸಿ, ಬೇಸಾಯ ಆರಂಭಿಸಿದೆ. ಉತ್ತಮ ಇಳುವರಿ ಸಿಗಲಿಲ್ಲ. ಆದರೆ, ಆತ್ಮವಿಶ್ವಾಸ ಕಳೆದುಕೊಳ್ಳದೆ ಮರಳಿ ಯತ್ನಿಸಿದೆ. ಸ್ನೇಹಿತರ ಅನುಭವ ಕೇಳಿ, ಶಿವಮೊಗ್ಗದಿಂದ 2 ಕೆ.ಜಿ. ಬೀಜ ತರಿಸಿ, ಅಣಬೆ ಬೆಳೆಸಿದೆ. ಈಗ 20 ಕೆ.ಜಿ ಬೀಜ ಹಾಕಿ, 160 ಕೆ.ಜಿ ಇಳುವರಿ ಪಡೆಯುತ್ತಿದ್ದೇನೆ. ಕುಟುಂಬದ ಸಹಕಾರದಿಂದ ಯಶಸ್ಸು ಗಳಿಸಲು ಸಾಧ್ಯವಾಯಿತು’ ಎನ್ನುತ್ತಾರೆ ಶ್ರೇಯಸ್.
ಪ್ರತಿ 25 ದಿನಕೊಮ್ಮೆ ಅಣಬೆ ಕಟಾವು ಮಾಡಿ ಮಾರಾಟ ಮಾಡಬಹುದು. ಹತ್ತು ಕೆ.ಜಿ. ಅಣಬೆ ಬೀಜದಲ್ಲಿ 60ರಿಂದ 70ಕೆ.ಜಿ.ಯಷ್ಟು ಉತ್ಪನ್ನ ಸಿಗುತ್ತದೆ. ತೀರ್ಥಹಳ್ಳಿ, ಕೊಪ್ಪ, ಉಡುಪಿ, ಮಂಗಳೂರು ಭಾಗದಲ್ಲಿ ಮಾರುಕಟ್ಟೆಯಿದೆ. ತಿಂಗಳಿಗೆ ಸರಾಸರಿ ₹20ಸಾವಿರದಿಂದ ₹25ಸಾವಿರದವರೆಗೆ ಆದಾಯ ಪಡೆಯಬಹುದು ಎಂಬುದು ಅವರ ಅನುಭವ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.