ಖಾಲಿ ಜಾಗಕ್ಕೆ ನಗರಸಭೆ ಫಲಕ ಅಭಿಯಾನ
ನಗರ ವ್ಯಾಪ್ತಿಯಲ್ಲಿರುವ ಸ್ವಚ್ಛಗೊಳ್ಳದ ಖಾಲಿ ನಿವೇಶನ ಜಾಗಕ್ಕೆ ನಗರಸಭೆಯಿಂದ ಫಲಕಗಳನ್ನು ಅಳವಡಿಸುವ ಅಭಿಯಾನಕ್ಕೆ ಸದ್ಯದಲ್ಲಿ ಚಾಲನೆ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು. ಗೌರಿಕಾಲುವೆ ರಾಮನಹಳ್ಳಿ ವಿಜಯಪುರ ಸೇರಿದಂತೆ ವಿವಿಧೆಡೆ ಖಾಲಿ ಜಾಗದಲ್ಲಿ ತ್ಯಾಜ್ಯಗಳನ್ನು ತಂದು ಸುರಿಯದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಗರಸಭೆ ವತಿಯಿಂದಲೂ ಕರಪತ್ರ ಆಟೊರಿಕ್ಷಾ ಮೂಲಕ ಪ್ರಚಾರ ನಡೆಸಲಾಗಿದೆ. ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮಾಲೀಕರಿಗೆ ಮತ್ತೊಮ್ಮೆ ತಿಳಿವಳಿಕೆ ಮೂಡಿಸಲಾಗುವುದು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದರು. ನಗರವನ್ನು ಸಂಪೂರ್ಣ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ಮುಕ್ತವಾಗಿಸಲು ನಗರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಆಗ ನಗರದ ಸೌಂದರ್ಯ ಕಾಪಾಡಲು ಸಾಧ್ಯ ಎಂದು ಹೇಳಿದರು.