ಹೈದರಾಬಾದ್: ಕ್ರೈಸ್ತ ಸಮುದಾಯಕ್ಕೆ ಸೇರಿದ ಶಾಸಕಿ ವಂಗಾಲಪುಡಿ ಅನಿತಾ ಅವರನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ಗೆ ನೇಮಕ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ತೆಲುಗು ದೇಶಂನ ಅನಿತಾ ಅವರು ಹಿಂದೂ ಧರ್ಮಕ್ಕೆ ಸೇರಿದವರನ್ನು ಮದುವೆಯಾಗಿದ್ದಾರೆ. ‘ನಾನು ಕ್ರಿಶ್ಚಿಯನ್. ನನ್ನ ಬ್ಯಾಗ್ ಮತ್ತು ಕಾರಿನಲ್ಲಿ ಯಾವಾಗಲೂ ಬೈಬಲ್ನ ಪ್ರತಿ ಇಟ್ಟುಕೊಂಡಿರುತ್ತೇನೆ. ಹಿಂದೂವನ್ನು ಮದುವೆಯಾಗಿದ್ದರೂ ನಾನು ಕ್ರಿಶ್ಚಿಯನ್’ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಮಂಡಳಿಯನ್ನು ಪುನರ್ರಚಿಸುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಆಗ್ರಹಿಸಿದೆ.
ಆಗಮ ಶಾಸ್ತ್ರಗಳನ್ನು ಅಧ್ಯಯನ ಮಾಡಿರುವವರನ್ನು ಮಂಡಳಿಗೆ ನೇಮಿಸಬೇಕೆ ಹೊರತು ಅನಿತಾ ಅವರಂತಹ ಹಿಂದೂಯೇತರ ವ್ಯಕ್ತಿಗಳನ್ನಲ್ಲ ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.