ಶೃಂಗೇರಿ: ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ 403 ದಿನಗಳ ಧರ್ಮಪ್ರಚಾರ ಯಾತ್ರೆ ಪೂರೈಸಿ ಶುಕ್ರವಾರ ಸಂಜೆ ಪುರಪ್ರವೇಶ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರಿನಿವಾಸ್ ತಾಲ್ಲೂಕಿನ ಪರವಾಗಿ ಫಲಪುಷ್ಪ ನೀಡಿ ಸ್ವಾಮೀಜಿ ಅವರನ್ನು ಸ್ವಾಗತಿಸಿದರು. ನಂತರ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಶ್ರಿಮಠಕ್ಕೆ ವಿಶೇಷವಾಗಿ ಸಿದ್ಧಪಡಿಸಿದ್ದ ರಥದಲ್ಲಿ ಸ್ವಾಮೀಜಿಯವರನ್ನು ಕುಳ್ಳಿರಿಸಿ ಮೆರವಣಿಗೆಯ ಮೂಲಕ ಕರೆದೊಯ್ಯ ಲಾಯಿತು. ಪಟ್ಟಣದ ಸ್ವಾಗತ ದ್ವಾರದ ಬಳಿ ಇರುವ ಮಸೀದಿ ಮುಂಭಾಗದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಫಲಪುಷ್ಪ ಸಮರ್ಪಣೆ ಮಾಡಲಾಯಿತು.
ಸಾವಿರಾರು ಜನರು ಪಾಲ್ಗೊಂಡಿದ್ದ ಮೆರವಣಿ ೆಯಲ್ಲಿ ಆನೆ, ಕುದುರೆ, ತಟ್ಟಿರಾಯ, ಸ್ಥಬ್ದಚಿತ್ರಗಳು, ವಿಶೇಷ ವಾದ್ಯಗಳು ಮೆರುಗು ನೀಡಿದವು. ವಿವಿಧ ಭಜನಾ ಮಂಡಳಿಯ ಸದಸ್ಯರು ದಾರಿಯುದ್ದಕ್ಕೂ ದೇವರನಾಮಗಳನ್ನು ಹಾಡುತ್ತಾ ಸಾಗಿದರು.
ಧರ್ಮ ಯಾತ್ರೆ: ಶಾರದಾ ಪೀಠದ ಸ್ವಾಮೀಜಿ ಯವರ ಧರ್ಮಪ್ರಚಾರ ಯಾತ್ರೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಶಾರದಾ ಪೀಠದಲ್ಲಿರುವಾಗ ನಡೆಯುವ ಎಲ್ಲಾ ದೈನಂದಿನ ಪೂಜಾ ವಿಧಿವಿಧಾನಗಳು, ಹಬ್ಬಗಳು ಯಾತ್ರಾ ಸಂದರ್ಭದಲ್ಲೂ ನಡೆಯುತ್ತವೆ.