ಅಹಮದಾಬಾದ್: ವಿಶ್ವ ಹಿಂದೂ ಪರಿಷತ್ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ (62) ಅವರು ಮಂಗಳವಾರ ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸವನ್ನು ಗುರುವಾರ ಅಂತ್ಯಗೊಳಿಸಿದ್ದಾರೆ.
‘ಸಾಧುಗಳ ಸಲಹೆ ಮೇರೆಗೆ ನಾನು ಉಪವಾಸ ಕೊನೆಗೊಳಿಸುತ್ತಿದ್ದೇನೆ. ಅವರ ಆದೇಶದಂತೆ, ಹಿಂದೂಗಳ ಅಭಿವೃದ್ಧಿಗಾಗಿ ನಾನು ಕಾರ್ಯನಿರ್ವಹಿಸಲು ಬದ್ಧನಾಗಿದ್ದೇನೆ. ರೈತರನ್ನು ಸಾಲಮುಕ್ತಗೊಳಿಸಲು, ಯುವಜನರಿಗೆ ಉದ್ಯೋಗ ದೊರೆಯಲು, ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ’ ಎಂದು ತೊಗಾಡಿಯಾ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಸತ್ತು, ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಅವರು ಉಪವಾಸ ಆರಂಭಿಸಿದ್ದರು. ಆದರೆ ಅವರ ಆರೋಗ್ಯ ಕ್ಷೀಣಿಸಿದ್ದರಿಂದ, ಉಪವಾಸ ನಿಲ್ಲಿಸುವಂತೆ ಅನೇಕ ಸಾಧುಗಳು ಸಲಹೆ ನೀಡಿದರು.
ತೊಗಾಡಿಯಾ ಮೂರು ಕೆ.ಜಿ. ತೂಕ ಕಳೆದುಕೊಂಡಿದ್ದಾರೆ ಹಾಗೂ ರಕ್ತದೊತ್ತಡ ಅಧಿಕವಾಗಿತ್ತು. ಮಧುಮೇಹದಿಂದ ಬಳಲುತ್ತಿರುವ ಅವರು ಉಪವಾಸ ಮುಂದುವರಿಸಿದಲ್ಲಿ, ಮೂತ್ರಪಿಂಡದ ಮೇಲೆ ಪರಿಣಾಮವಾಗಬಹುದು. ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗಬಹುದು ಎಂದು ಸ್ಥಳದಲ್ಲಿದ್ದ ವೈದ್ಯರು ಸಲಹೆ ನೀಡಿದ್ದರು.