ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಸ್ಮೃತಿಯ ಆಧುನಿಕ ವಕ್ತಾರ ಭೈರಪ್ಪ: ಸಾಹಿತಿ ಪ್ರೊ.ಚಂದ್ರಶೇಖರ್‌ ತಾಳ್ಯ ಟೀಕೆ

Last Updated 3 ಮೇ 2019, 11:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಾದಂಬರಿಕಾರ ಪ್ರೊ.ಎಸ್‌.ಎಲ್‌.ಭೈರಪ್ಪ ಅವರು ಮನುಸ್ಮೃತಿಯ ಆಧುನಿಕ ವಕ್ತಾರ. ಅವರ ಎಲ್ಲ ಕೃತಿಗಳಲ್ಲಿ ಪುರುಷರ ಧ್ವನಿ ಅಭಿವ್ಯಕ್ತಿಗೊಳ್ಳುತ್ತಿದೆ. ಮಹಿಳೆಯರ ಬಗೆಗೆ ಅವರು ಕೀಳುಮಟ್ಟದ ದೃಷ್ಟಿಕೋನ ಹೊಂದಿದ್ದಾರೆ ಎಂದು ಸಾಹಿತಿ ಪ್ರೊ.ಚಂದ್ರಶೇಖರ ತಾಳ್ಯ ಟೀಕಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘ ಇಲ್ಲಿನ ಸೇಂಟ್ ಮೇರಿಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮೊದಲ ಹೆಜ್ಜೆ’ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನೋಂದಣಿ ಪುಸ್ತಕದಲ್ಲಿ ಸಹಿ ಪಡೆದು ಪತ್ನಿಯನ್ನು ಮುಟ್ಟಬೇಕಾಗುತ್ತದೆ’ ಎಂಬ ಭೈರಪ್ಪ ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಮಹಿಳೆಯ ಸುರಕ್ಷೆತೆಗೆ ಸಂಬಂಧಿಸಿದ ಕಾನೂನಿನ ಆಶಯವನ್ನು ಭೈರಪ್ಪ ಅವರು ಅರಿತಂತೆ ಕಾಣುತ್ತಿಲ್ಲ. ಹಾಸ್ಯ ಚಟಾಕಿ ಹಾರಿಸುವ ಭರದಲ್ಲಿ ಸ್ತ್ರೀಯನ್ನು ವ್ಯಂಗ್ಯ ಮಾಡಿದ್ದು ವಿಪರ್ಯಾಸ. ಮಹಿಳೆಯರನ್ನು ನೋಡುವ ಅವರ ದೃಷ್ಟಿಕೋನವೇ ಸರಿಯಿಲ್ಲ’ ಎಂದು ಜರಿದರು.

‘ಮಹಿಳೆ ಇಂದಿಗೂ ಬಂಧನದಲ್ಲಿ ಬದುಕುತ್ತಿದ್ದಾಳೆ. ಬಂಧನದ ಬದುಕಿನ ಬಗ್ಗೆ ಅವರಿಗೇ ಅರಿವಿಲ್ಲ. ಶಬರಿಮಲೆ ದೇಗುಲಕ್ಕೆ ಮಹಿಳೆಗೂ ಅವಕಾಶ ಕಲ್ಪಿಸಿದಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸ್ತ್ರೀಯರು. ಹೈಟೆಕ್‌ ಹೆಣ್ಣು ಮಕ್ಕಳ ಬಗೆಗಿನ ಅಭಿಪ್ರಾಯವನ್ನು ಸಾರ್ವತ್ರಿಕರಣಗೊಳಿಸುವುದು ತಪ್ಪು. ಹೆಣ್ಣಿನ ನೋವನ್ನು ಸಮಷ್ಠಿಯಾಗಿ ಗ್ರಹಿಸುವಲ್ಲಿ ಸಮಾಜ ವಿಫಲವಾಗಿದೆ’ ಎಂದರು.

‘ಮಾತೃ ಪ್ರಧಾನ ಸಮಾಜದಿಂದ ಪಿತೃ ಪ್ರಧಾನ ವ್ಯವಸ್ಥೆಗೆ ಹೊರಳಿದ ಬಳಿಕ ಮಹಿಳೆ ಶೋಷಣೆಗೆ ಒಳಗಾಗುತ್ತಿದ್ದಾಳೆ. ಲೌಕಿಕ ಹಾಗೂ ಅಲೌಕಿಕ ಬದುಕಿನಿಂದ ಮಹಿಳೆ ಬಿಡುಗಡೆ ಹೊಂದುವ ಅಗತ್ಯವಿದೆ. 12ನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ನಡೆದ ಆಂದೋಲನ, ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿತು. ಅದು ನಿಜವಾದ ಸ್ತ್ರೀವಾದ’ ಎಂದು ಅಭಿಪ್ರಾಯಪಟ್ಟರು.

‘ಮಹಿಳೆ ಶಿಕ್ಷಣ ಪಡೆದರೂ ಸಮಾಜದಲ್ಲಿನ ಪಾಲ್ಗೊಳ್ಳುವಿಕೆ ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸಿಲ್ಲ. ಶತಮಾನದ ಹಿಂಜರಿಕೆ ಇದಕ್ಕೆ ಕಾರಣ ಇರಬಹುದು. ಅವಳ ಕಷ್ಟ, ಸಂಕಟ ಇನ್ನಷ್ಟು ಹೆಚ್ಚಾಗಿದೆ. ಮಹಿಳೆಯ ಸಂಕೀರ್ಣ ಯಾತನೆ ಸಾಹಿತ್ಯದ ಮೂಲಕ ಮಾತ್ರ ಹೊರಬರಲು ಸಾಧ್ಯ. ಕಥೆ, ಕವಿತೆಯ ಮೂಲಕ ಅಭಿವ್ಯಕ್ತಿಗೊಳಿಸಿ’ ಎಂದು ಸಲಹೆ ನೀಡಿದರು.

‘ಪುರುಷ ಪ್ರಧಾನ ವ್ಯವಸ್ಥೆಯಿಂದ ಮಹಿಳೆ ವಿಮುಕ್ತಿ ಹೊಂದಬೇಕಿದೆ. ಯಾವ ಪುರುಷನೂ ಮಹಿಳೆಯ ಸಂಕಷ್ಟಕ್ಕೆ ಪರಿಹಾರ ನೀಡುವುದಿಲ್ಲ. ಈ ಸಮಸ್ಯೆಗೆ ಮಹಿಳಾ ಸಮುದಾಯವೇ ಪರಿಹಾರ ಮಾರ್ಗ ಹುಡಕಬೇಕಿದೆ. ಇದು ಸಕಾರಾತ್ಮಕ ಮಾರ್ಗದಿಂದ ಮಾತ್ರ ಸಾಧ್ಯ. ಪುರುಷರನ್ನು ದ್ವೇಷ ಮಾಡುವುದರಿಂದ ಲಿಂಗ ಸಮಾನತೆ ಪಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್, ಕೃತಿ ಸಂಪಾದಕರಾದ ಸಿ.ಬಿ.ಶೈಲಾ ಜಯಕುಮಾರ್, ಡಿ.ಮಂಜುಳಾ ರಾಘವೇಂದ್ರ, ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ, ಗ್ರಂಥಾಲಯ ಮುಖ್ಯಸ್ಥ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT