ಚಿತ್ರದುರ್ಗ: ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೇಲ್ವರ್ಗ ಮತ್ತು ತಳಸಮುದಾಯಗಳ ನಡುವೆ ತಾರತಮ್ಯ ಮಾಡುತ್ತಿದೆ. ಜಾತಿ ಆಧಾರದಲ್ಲಿ ಸಮಾಜವನ್ನು ಒಡೆಯುವ ಹುನ್ನಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಎನ್.ಡಿ. ಕುಮಾರ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮೀಸಲಾತಿಯ ಬಗ್ಗೆ ಪ್ರಬಲ ಸಮುದಾಯಗಳು ಧ್ವನಿ ಎತ್ತುತ್ತಿವೆ. ಆದರೆ, ಧ್ವನಿಯೇ ಇಲ್ಲದ ಹಲವು ಸಮುದಾಯಗಳು ಮೌನಕ್ಕೆ ಶರಣಾಗಿವೆ. ಸರ್ಕಾರದ ನಡೆಯಿಂದ ಬಹುತೇಕರಲ್ಲಿ ಆತಂಕ ಮೂಡಿದೆ’ ಎಂದು ಹೇಳಿದರು.
‘ಪ್ರವರ್ಗ 2ಎ ಪಟ್ಟಿಗೆ ಸೇರಲು ರಾಜ್ಯದ ಹಲವು ಜಾತಿಗಳು ಬಹುದಿನಗಳಿಂದ ಬೇಡಿಕೆ ಮುಂದಿಡುತ್ತಿವೆ. ಆದರೆ, ಸರ್ಕಾರ ಪ್ರಬಲ ಜಾತಿಯ ಬೇಡಿಕೆಯನ್ನು ಈಡೇರಿಸಲು ಮುಂದಾಗಿದೆ. ಜಾತಿಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸಿದರೂ, ಪ್ರವರ್ಗ 2ಎಗೆ ನಿಗದಿಯಾದ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ’ ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ‘ಬಿಜೆಪಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗುತ್ತಿದೆ. ಅವರನ್ನು ಓಲೈಕೆ ಮಾಡಲು ಶ್ರಮಿಸುತ್ತಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಜನರ ಆಹಾರದ ಹಕ್ಕಿನ ಮೇಲೆ ನಿರ್ಬಂಧ ವಿಧಿಸಲು ಮುಂದಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಕಾರ್ಯಾಧ್ಯಕ್ಷ ಹಾಲೇಶ್, ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು, ಮುಖಂಡರಾದ ಬಿ.ಟಿ.ಜಗದೀಶ್, ನಗರಸಭಾ ಸದಸ್ಯರಾದ ಮೀನಾಕ್ಷಿ, ಚಂದ್ರಶೇಖರ್ ಇದ್ದರು.