ಮಸ್ಕಲ್ (ಹಿರಿಯೂರು): ‘ಕ್ಷೇತ್ರದ ಜನ, ಮಾಧ್ಯಮಗಳು ನನಗೆ ಸಚಿವ ಸ್ಥಾನ ಸಿಕ್ಕೇ ಬಿಟ್ಟಿತು ಅಂದುಕೊಂಡಿದ್ದರು. ಬಹಳಷ್ಟು ಸಂದರ್ಭಗಳಲ್ಲಿ ನಾವು ಅಂದುಕೊಂಡಿದ್ದು, ಜನ ಬಯಸಿದ್ದೆಲ್ಲ ಆಗುವುದಿಲ್ಲ. ಶಾಸಕಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಬದ್ಧಳಾಗಿದ್ದೇನೆ’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭರವಸೆ ಹೇಳಿದರು.
ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಹಿಂದಿನ 3 ವರ್ಷದಲ್ಲಿ ಶಾಲಾ–ಕಾಲೇಜುಗಳಿಗೆ ನೂತನ ಕಟ್ಟಡ, ಬ್ಯಾರೇಜ್, ರಸ್ತೆ ಸುಧಾರಣೆ ಸೇರಿದಂತೆ ₹ 700 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಮಸ್ಕಲ್ ಗ್ರಾಮದ ಕೆರೆಗೆ ವಾಣಿ ವಿಲಾಸದ ನೀರನ್ನು ಹರಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಪಟ್ರೆಹಳ್ಳಿಯಲ್ಲಿ ₹ 25 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಆರಂಭದ ಹಂತದಲ್ಲಿದೆ’ ಎಂದರು.
‘ಧರ್ಮಪುರ ಹೋಬಳಿಯ ಏಳು ಕೆರೆಗಳಿಗೆ ₹ 90 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜ ನೆಗೆ ಸಂಪುಟದ ಅನುಮೋದನೆ ಪಡೆದಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ರೈತರ ನಿಯೋಗವನ್ನು ಸಿಎಂ ಹಾಗೂ ಜಲಸಂಪನ್ಮೂಲ ಸಚಿವರ ಬಳಿಗೆ ಕರೆದೊಯ್ಯುತ್ತೇನೆ. ಸಚಿವಳಾಗಿ ಮಾಡಬಹುದಿದ್ದ ಅಭಿವೃದ್ಧಿಯನ್ನು ಮಾಡುತ್ತೇನೆ’ ಎಂದರು.
ಕಲಾವತಿ, ವಿ.ಎಲ್. ಗೌಡ, ಹರೀಶ್, ಹನು ಮಂತಪ್ಪ, ಮುಖಂಡರಾದ ಎಲ್. ಆನಂದಶೆಟ್ಟಿ, ಎಲ್. ನಾಗರಾಜಶೆಟ್ಟಿ, ಶ್ರೀನಿವಾಸ ಬಾಬು, ಕೃಷ್ಣಮೂರ್ತಿ, ಚಂದ್ರಶೇಖರ್, ರಾಜಣ್ಣ, ಶಿವಲಿಂಗಪ್ಪ, ಭೀಮಣ್ಣ, ಓಂಕಾರ, ಶಿವಮೂರ್ತಿ, ರಂಗಸ್ವಾಮಿ, ಸೆಂಥಿಲ್, ಮಂಜುನಾಥ ಇದ್ದರು.