ಚಿತ್ರದುರ್ಗ: ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯಾಗಿರುವ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಬುಧವಾರ ಸಂಜೆ ಎಸ್ ಜೆಎಂ ವಿದ್ಯಾಪೀಠದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಸಿದರು.
ಮಠದ ಒಳ ಆವರಣದಲ್ಲಿನ ಅಲ್ಲಮಪ್ರಭ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಸಭೆ ನಡೆಸಿದರು. ಶರಣರು ತಮ್ಮ ಕೊಠಡಿಯಿಂದ ಸ್ಕೈ ವಾಕ್ ಮೂಲಕ ಸಭಾಂಗಣಕ್ಕೆ ಆಗಮಿಸಿದರು. ಶರಣರು ಆಗಮಿಸುತ್ತಿದ್ದಂತೆ ಬಹುತೇಕರು ಕಾಲಿಗೆ ನಮಸ್ಕರಿಸಿದರು.
'ಪ್ರತಿ ತಿಂಗಳು ನಡೆಯುವ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಸಭೆಯಂತೆ ಇಂದು ಸಹ ನಡೆಯುತ್ತಿದೆ. ಇದರಲ್ಲಿ ವಿಶೇಷವಿಲ್ಲ' ಎಂದು ಸಭೆಗೆ ತೆರಳುತ್ತಿದ್ದವರು ತಿಳಿಸಿದರು.
ಶರಣರ ಮೇಲೆ ಫೋಕ್ಸೊ ಪ್ರಕರಣ ದಾಖಲಾಗಿರುವ ಕಾರಣ ಸಭೆಯು ಮಹತ್ವ ಪಡೆದಿದೆ. ಸಭೆಯಲ್ಲಿ ಮುಖ್ಯಸ್ಥರ ಜತೆ ಮಠದ ಆಡಳಿತ ಮಂಡಳಿ ಮತ್ತು ಮುಖಂಡರು ಭಾಗವಹಿಸಿದ್ದರು. ಪ್ರಕರಣದ ನಾಲ್ಕನೇ ಆರೋಪಿ ಪರಮಶಿವಯ್ಯ ಸಹ ಸಭೆಯಲ್ಲಿ ಇದ್ದರು.