ಚಿತ್ರದುರ್ಗ: ವಕೀಲರ ಮೇಲೆ ಪೊಲೀಸರು ಬೆಂಗಳೂರಿನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಕೀಲರು ಸೋಮವಾರ ಪ್ರತಿಭಟನೆ ನಡೆಸಿದರು.
ನ್ಯಾಯಾಲಯದ ಕಲಾಪದಿಂದ ಹೊರಗುಳಿದ ವಕೀಲರು ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದರು. ಘಟನೆ ಖಂಡಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ಕಕ್ಷಿದಾರರೊಂದಿಗೆ ತೆರಳಿದ್ದ ವಕೀಲರ ಮೇಲೆ ಹಲ್ಲೆ ನಡೆದಿದೆ. ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅನಗತ್ಯವಾಗಿಕಿರುಕುಳ ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ದೂರಿದರು.
‘ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು. ಸೇವೆಯಿಂದ ಅಮಾನತುಕೊಳಿಸಿ ತನಿಖೆ ನಡೆಸಬೇಕು. ಹಲ್ಲೆಗೊಳಗಾದ ವಕೀಲರ ವೈದ್ಯಕೀಯ ವೆಚ್ಚವನ್ನು ಅಧಿಕಾರಿ ಭರಿಸಬೇಕು. ಸರಿಯಾದ ಪರಿಹಾರವನ್ನು ಕೊಡಿಸಬೇಕು’ ಎಂದು ಒತ್ತಾಯಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ವಿಜಯಕುಮಾರ್, ಉಪಾಧ್ಯಕ್ಷ ಟಿ.ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಅನಿಲ್ ಕುಮಾರ್, ವಕೀಲರಾದ ಪಿ.ಕೆ.ಗಿರೀಶ್, ಕೆ.ಚಂದ್ರಶೇಖರಪ್ಪ ಇದ್ದರು.