ಸಿರಿಗೆರೆ: ಭಾನುವಾರ ಮಧ್ಯಾಹ್ನ ಮುಕ್ಕಾಲು ಗಂಟೆಗಿಂತ ಹೆಚ್ಚು ಕಾಲ ಸುರಿದ ಕೃತ್ತಿಕಾ ಮಳೆ ಅಡಿಕೆ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿಸಿದೆ.
ಎಂದಿನಂತೆ ಸುಡು ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ಜನರು ಮಳೆಗಾಗಿ ಮೋಡಗಳನ್ನು ನೋಡುವುದು ನಿತ್ಯದ ಕಾಯಕವಾಗಿತ್ತು. ಕೃತ್ತಿಕಾ ಮಳೆ ಇಳೆಗೆ ಬಿದ್ದು ವಾತಾವರಣವೇ ತಂಪಾದಂತೆ ಕೃಷಿಕರಲ್ಲಿ ಸಂತಸ ದುಪ್ಪಟ್ಟಾಗಿದೆ.
ಕಳೆದ ಮೂರು ತಿಂಗಳ ಕಾಲ ನಿತ್ಯವೂ ಟ್ರ್ಯಾಕ್ಟರ್, ಲಾರಿಗಳ ಮೂಲಕ ನೀರು ಕೊಂಡು ತೋಟಗಳ ರಕ್ಷಣೆಗೆ ಮುಂದಾಗಿದ್ದ ಕೃಷಿಕರಿಗೆ ಭಾನುವಾರ ಬಂದ ಮಳೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಮಳೆ ಬಂದು ನಿಂತ ನಂತರ ತೋಟಗಳಿಗೆ ಎಡತಾಕಿದ ಕೃಷಿಕರು ತೋಟಗಳು ಹಸಿಯಾಗಿರುವ ಸಂತೋಷದ ಸಂಗತಿಯನ್ನು ಹಂಚಿಕೊಂಡರು. ನಾಳೆಯಿಂದ ನೀರನ್ನು ಕೊಂಡುಕೊಳ್ಳುವ ಕೆಲಸಕ್ಕೆ ವಿರಾಮ ಸಿಕ್ಕಿದೆ ಎಂದರು.
ಸುತ್ತಲಿನ ಜಮ್ಮೇನಹಳ್ಳಿ, ಸಿದ್ದಾಪುರ, ದೊಡ್ಡಾಲಗಟ್ಟ, ರಂಗಾಪುರ, ಅಳಗವಾಡಿ, ಸೀಗೇಹಳ್ಳಿಯಲ್ಲಿಯೂ ಉತ್ತಮ ಮಳೆಯಾಗಿದೆ. ದೊಡ್ಡಾಲಗಟ್ಟದ ಹಳ್ಳದಲ್ಲಿ ನೀರು ಹರಿಯುತ್ತಿದೆ. ಜಾನುಕೊಂಡದ ಬಳಿ ಇರುವ ಕ್ಯಾದಿಗೆ ಮರದ ಹಳ್ಳದಲ್ಲಿ ನಿರೀಕ್ಷೆ ಮಾಡದ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.
ಬಿತ್ತನೆ ಕೆಲಸಕ್ಕೆ ಇಂಬು: ಮಳೆ ಬಂದ ತರುವಾಯ ಬೀಜ ಮತ್ತು ಗೊಬ್ಬರದ ಅಂಗಡಿಗಳಲ್ಲಿ ಚಟುವಟಿಕೆಗಳು ಆರಂಭವಾಗಿವೆ. ಮುಂಗಾರು ಬಿತ್ತನೆಗೆ ಬೇಕಾಗುವಷ್ಟು ಬೀಜ ಮತ್ತು ಗೊಬ್ಬರದ ದಾಸ್ತಾನು ಅಂಗಡಿಗಳಲ್ಲಿ ಇದೆ. ಈ ಮುಂಗಾರಿನಲ್ಲಿ ರೈತರ ಬಿತ್ತನೆ ಕಾರ್ಯಗಳಿಗೆ ತೊಂದರೆಯಾಗದಂತೆ ಬೀಜ ಗೊಬ್ಬರದ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್ ಹೇಳಿದರು.
ಚಾವಣಿ ಕುಸಿತ: ಸಮೀಪದ ವಿಜಾಪುರ ಗ್ರಾಮದಲ್ಲಿ ಬಸವರಾಜ್ ಅವರ ಮನೆಯ ಚಾವಣಿ ಕುಸಿದ ಬಗ್ಗೆ ವರದಿಯಾಗಿದೆ.
ದೊಡ್ಡಾಲಗಟ್ಟದ ಹಳ್ಳದಲ್ಲಿ ನೀರು ಹರಿಯುತ್ತಿರುವುದು
ಜಾನುಕೊಂಡದ ಕ್ಯಾದಿಗೆ ಮರದ ಹಳ್ಳ ತುಂಬಿ ಹರಿಯುತ್ತಿರುವ ದೃಶ್ಯ