ಚಿತ್ರದುರ್ಗ: ಕೋಟೆನಾಡಿನ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಇಲ್ಲಿನ ಮುರುಘಾಮಠದಲ್ಲಿ ಶನಿವಾರ ಶಿವಮೂರ್ತಿ ಮುರುಘಾ ಶರಣರು ನೂರಾರು ಬಸವ ಭಕ್ತರ ಸಮ್ಮುಖದಲ್ಲಿ ‘ಶೂನ್ಯ ಪೀಠಾರೋಹಣ’ ಮಾಡಿದರು.
ಶ್ರೀಮಠದ ಶೂನ್ಯಪೀಠ ಪರಂಪರೆಯಂತೆ ಪೀಠಾಧ್ಯಕ್ಷರಾದ ಶರಣರು ಮಠದ ಪ್ರಾಂಗಣದಲ್ಲಿರುವ ಹಿರಿಯ ಗುರುಗಳಾದ ಮುರುಗಿ ಶಾಂತವೀರ ಸ್ವಾಮೀಜಿ ಅವರ ಗದ್ದುಗೆಗೆ ಭಕ್ತಿ ಸಮರ್ಪಿಸಿದರು.
ಚಿನ್ನದ ಕಿರೀಟ ಸೇರಿ ಇತರೆ ಆಭರಣಗಳೆಲ್ಲವನ್ನೂ ಭಕ್ತರ ಕೈಗಿಟ್ಟರು. ನಂತರ ರುದ್ರಾಕ್ಷಿ ಕಿರೀಟ ಧರಿಸಿ, ವಚನ ಕೃತಿಯನ್ನು ಕೈಯಲ್ಲಿಡಿದರು. ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳು, ಸಾಧಕರು, ಭಕ್ತರು, ಉತ್ಸವ ಸಮಿತಿ ಸದಸ್ಯರು, ನೂರಾರು ಜನರ ವಚನ ಘೋಷಣೆಗಳೊಂದಿಗೆ ಪೀಠಾರೋಹಣ ಮಾಡಿದರು.
ವೈಚಾರಿಕತೆಯಿಂದಲೇ ಗುರುತಿಸಿಕೊಂಡಿರುವ ಶೂನ್ಯ ಪೀಠಾರೋಹಣ ಅತ್ಯಂತ ಮಹತ್ವ ಪಡೆದುಕೊಂಡಿದೆ. ಶರಣರಿಗಿಂತ ಹಿಂದಿನ ಪೀಠಾಧ್ಯಕ್ಷರವರೆಗೂ ದಸರಾ ಆಚರಿಸಿ ರತ್ನ ಖಚಿತ ಸಿಂಹಾಸನದಲ್ಲಿ, ಚಿನ್ನದ ಕಿರೀಟ ತೊಟ್ಟು ಪಲ್ಲಕ್ಕಿಯಲ್ಲಿ ಕುಳಿತು ಉತ್ಸವ ನಡೆಸುತ್ತಿದ್ದರು.
ಶರಣರು ಪೀಠಾಧ್ಯಕ್ಷರಾಗಿ ವೈಚಾರಿಕ ಉತ್ಸವ ಆರಂಭಿಸಿದ ಮೇಲೆ ಈ ಸಂಪ್ರದಾಯಗಳನ್ನು ಕೈಬಿಟ್ಟರು. ಬದಲಿಗೆ ರುದ್ರಾಕ್ಷಿ ಕಿರೀಟ ಧರಿಸಿ ಪೀಠಾರೋಹಣ ಮಾಡುವಂತಹ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಪೀಠಾರೋಹಣ ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಶರಣರಿಗೆ ಫಲಪುಷ್ಪ ಕಾಣಿಕೆಗಳನ್ನು ಸಲ್ಲಿಸಿದರು.