ನಾಯಕನಹಟ್ಟಿ: ರಾಜ್ಯದ ಇತಿಹಾಸದಲ್ಲಿ ಚಿತ್ರದುರ್ಗವನ್ನಾಳಿದ ರಾಜ ವೀರ ಮದಕರಿನಾಯಕರಿಗೆ ವಿಶೇಷವಾದ ಸ್ಥಾನಮಾನವಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಶಿವಣ್ಣ ಹೇಳಿದರು.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ಬಿಜೆಪಿ ಎಸ್ಟಿ ಮೋರ್ಚಾ ಹಮ್ಮಿಕೊಂಡಿದ್ದ ರಾಜ ವೀರ ಮದಕರಿನಾಯಕರ 241ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಚಿತ್ರದುರ್ಗದ ನಾಯಕರಲ್ಲಿ ಕಡೆಯ ನಾಯಕರಾದ ಮದಕರಿನಾಯಕ ಚಿತ್ರದುರ್ಗದ ಸಿಂಹಾಸನಕ್ಕೇರಿದಾಗ ಅವರಿಗೆ ಕೇವಲ 12 ವರ್ಷ ಆಗಿತ್ತು. ಅಂದಿನ ಕಾಲದಲ್ಲಿ ಚಿತ್ರದುರ್ಗವು ದಕ್ಷಿಣ ಬಾರತದಲ್ಲೇ ಒಂದು ಬಲಶಾಲಿ ಸೈನ್ಯವಾಗಿತ್ತು. ಚಿತ್ರದುರ್ಗವನ್ನು ಕಟ್ಟುವ ಜತೆಗೆ ಸುತ್ತಮುತ್ತಲ ಕೃಷಿಗೆ ಅನುಕೂಲವಾಗಲು ಭರಮಸಾಗರ ಮತ್ತು ಭೀಮಸಾಗರ ಕೆರೆಗಳನ್ನು ಕಟ್ಟಿಸಿದರು. ಹಲವಾರು ದೇವಾಲಯಗಳನ್ನು ಕಟ್ಟಿಸುವ ಮೂಲಕ ಧಾರ್ಮಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಯುದ್ಧಗಳು ಮತ್ತು ಕೋಟೆಗಳ ರಕ್ಷಣೆಯ ಕಾರಣ ಇತಿಹಾಸದಲ್ಲಿ ವಿಶೇಷವಾದ ಮನ್ನಣೆ ಗಳಿಸಿದ್ದಾರೆ’ ಎಂದರು.
ನಾಯಕನಹಟ್ಟಿ ಬಿಜೆಪಿ ಮಂಡಲ ಎಸ್ಟಿ ಮೋರ್ಚಾ ಅಧ್ಯಕ್ಷ ಸಿ.ಬಿ. ಮೋಹನ್ಕುಮಾರ್, ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದ, ಪದಾಧಿಕಾರಿಗಳಾದ ಎಂ. ಪರ್ವತಯ್ಯ, ಬೋರಣ್ಣ, ನಾಗೇಶ್, ತಿಪ್ಪೇಶ್, ತಿಪ್ಪೇಸ್ವಾಮಿ, ಮಂಜಣ್ಣ, ಓಬಯ್ಯ, ತಿಪ್ಪೇಸ್ವಾಮಿ, ಓಬಳೇಶ, ಓಬಣ್ಣ ಇದ್ದರು.