ಚಳ್ಳಕೆರೆ: ಬಯಲುಸೀಮೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಳೆ ಇಲ್ಲದೇ ಕಂಗಾಲಾಗಿರುವ ಮಹಿಳೆಯರು ತಮ್ಮ ಕೌಶಲ ಆಧಾರಿತ ಕಸುಬುಗಳನ್ನು ಮುಂದುವರಿಸಿಕೊಂಡು ಬರಲು ಆರ್ಥಿಕ ಸಹಾಯಧನ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಅತ್ಯಂತ ಶ್ಲಾಘನೀಯವಾದುದು ಎಂದು ತಹಶೀಲ್ದಾರ್ ಡಿ.ಕೆ. ರಾಮಚಂದ್ರಪ್ಪ ಹೇಳಿದರು.
ಪಟ್ಟಣದ ರೋಟರಿ ಬಾಲ ಭವನದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮೋದ್ಯೋಗ ಸಂಸ್ಥೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಪ್ರತಿನಿಧಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ `ಸಿರಿಹಬ್ಬ' ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಾವಿರಾರು ಗ್ರಾಮೀಣ ಮಹಿಳೆಯರಿಗೆ ಕೆಲಸ ನೀಡುವ ಮೂಲಕ ಗುಡಿ ಕೈಗಾರಿಕೆಗೆ ಪ್ರೋತ್ಸಾಹಿಸುತ್ತ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತಿರುವ ಮಹತ್ವದ ಕಾರ್ಯಗಳನ್ನು ಸಮಾಜದ ಪ್ರತಿಯೊಂದು ಸಂಘ-ಸಂಸ್ಥೆಗಳೂ ಮಾಡಬೇಕಿದೆ. ಯಾವುದೇ ನೀರಾವರಿ ಯೋಜನೆಗಳು ಇಲ್ಲದ ತಾಲ್ಲೂಕಿನಲ್ಲಿ ಮಳೆಯೇ ಇಲ್ಲಿನ ಜನರಿಗೆ ಆಧಾರ. ಅದ್ದರಿಂದ, ಅಧಿಕವಾಗಿ ಕಂಬಳಿ ನೇಯ್ಗೆ ಮತ್ತು ಸೀರೆ ತಯಾರಿಕೆ ಅಂತಹ ಕೆಲಸ ಗೊತ್ತಿರುವ ಮಹಿಳೆಯರು ಆರ್ಥಿಕ ಸಹಾಯಧನ ಉಪಯೋಗಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ಸ್ವ-ಸಹಾಯ ಸಂಘಗಳ ತಯಾರಿಕ ಉತ್ಪನ್ನಗಳು ಒಂದು ವರ್ಷದಲ್ಲಿ ್ಙ 15 ಕೋಟಿ ಹಣವನ್ನು ಸಂಪಾದಿಸುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸಂಸ್ಥೆಯ ಕೆಲಸಗಳು ಪ್ರಾರಂಭವಾಗಿ ಹತ್ತು ತಿಂಗಳಲ್ಲಿ ಹತ್ತು ಸಾವಿರ ಮಹಿಳಾ ಸ್ವ-ಸಹಾಯ ಸಂಘಗಳನ್ನು ಸ್ಥಾಪನೆ ಮಾಡಿ, ಸಂಘದ ಪ್ರತಿನಿಧಿಗಳಿಗೆ ಕಸೂತಿ ಕೆಲಸಗಳ ತರಬೇತಿಯೊಂದಿಗೆ ಉದ್ಯೋಗದ ಮಾರ್ಗಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.
ತಾಲ್ಲೂಕು ಯೋಜನಾಧಿಕಾರಿ ಪ್ರದೀಪ್ ಮಾತನಾಡಿದರು. ಪುರಸಭೆ ಸದಸ್ಯ ಆರ್. ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಎಂ. ಚೇತನ್ ಕುಮಾರ, ನೇತಾಜಿ ಸಂಘದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಸಂಸ್ಥೆಯ ನಿರ್ದೇಶಕ ಮಹಾವೀರ ಅಜ್ರಿ, ತಾಲ್ಲೂಕು ಸಂಯೋಜನ ಕಾರ್ಯದರ್ಶಿ ಕಮಲಾ, ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.