2012ರ ಏ. 27ರಂದು ತಾಲ್ಲೂಕಿನ ನಾಗಸಮುದ್ರಕ್ಕೆ ರಾಜ್ಯದ ಬರ ವೀಕ್ಷಣೆ ಮಾಡಲು ಬಂದಿದ್ದ ಸೋನಿಯಾಗಾಂಧಿ ಅವರಿಗೂ ತಾಲ್ಲೂಕಿಗೆ ಭದ್ರಾ ನೀರು ಹರಿಸುವ ಬಗ್ಗೆ ಮನವಿ ಮಾಡಲಾಗಿತ್ತು, ಆದರೂ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ತಾಲ್ಲೂಕಿಗೆ ಕಳೆದ 5 ವರ್ಷಗಳಿಂದ ಮಳೆ ಬರುವ ಪ್ರಮಾಣ ಪೂರ್ಣ ಕುಂಠಿತವಾಗಿದೆ. ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಅಂತರ್ಜಲ ಸಮಸ್ಯೆ ಎದುರಿಸುವ ತಾಲ್ಲೂಕು ಎಂದು ಗುರುತಿಸಿಕೊಂಡಿದೆ. ಇಲ್ಲಿನ ರಂಗಯ್ಯನದುರ್ಗ ಜಲಾಶಯ, ಪಕ್ಕುರ್ತಿ ಕೆರೆ ಸೇರಿದಂತೆ ಎಲ್ಲಾ ದೊಡ್ಡ, ಚಿಕ್ಕ ಕೆರೆಗಳು ನೀರಿಲ್ಲದೆ ಪೂರ್ಣ ಒಣಗಿ ಹೋಗುವ ಮೂಲಕ ಆತಂಕ ಎದುರಾಗಿದೆ.
ಇಂತಹ ಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಜನರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಸಚಿವರು ಗಮನಹರಿಸಿ ಮೊಳಕಾಲ್ಮುರು ಭಾಗಕ್ಕೂ ನೀರು ಹರಿಸುವ ಕಾರ್ಯಕ್ಕೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮನವಿ ಮಾಡಲಾಗಿದೆ.
ತಾಲ್ಲೂಕಿಗೆ ನೀರು ತರುವ ಕಾರ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಂಘ, ಸಂಸ್ಥೆಗಳು, ಜನಪ್ರತಿನಿಧಿಗಳು, ರೈತಸಂಘದ ಕಾರ್ಯಕರ್ತರು, ಸಮಾಜ ಸೇವಕರು ಒಗ್ಗಟ್ಟಾಗಿ ಮುಂದಾಗಬೇಕಿದೆ ಎಂದು ಸಿಪಿಐ, ಜನಸಂಸ್ಥಾನ ಸಂಸ್ಥೆ ಸಲಹೆ ಮಾಡಿದೆ.