ಚಿತ್ರದುರ್ಗ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶನದಂತೆ ಸಣ್ಣ ಕೈಗಾರಿಕೆ ಆರಂಭಿಸಲು ಯಾವುದೇ ಭದ್ರತೆ ಇಲ್ಲದೇ ` 10 ಲಕ್ಷದವರೆಗೆ ಸಾಲ ನೀಡಲು ಬ್ಯಾಂಕ್ಗಳಿಗೆ ಅವಕಾಶವಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಪ್ರಧಾನ ವ್ಯವ್ಥಾಪಕ ಕೆ.ಶೀನಿವಾಸ್ ಹೇಳಿದರು.
ಜಿಲ್ಲಾ ಮಾಹಿತಿ ಕೇಂದ್ರ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಿರುದ್ಯೋಗಿ ಯುವಕರಿಗಾಗಿ ಆಯೋಜಿಸಿದ್ದ ‘ಸ್ವಂತ ಉದ್ದಿಮೆ ಆರಂಭಿಸುವುದು ಹೇಗೆ?’ ಎಂಬ ಕಾರ್ಯಾಗಾರದಲ್ಲಿ ಅವರು ಬ್ಯಾಂಕ್ ಸಾಲ ಸೌಲಭ್ಯ ಕುರಿತು ಮಾಹಿತಿ ನೀಡಿದರು.
ಭದ್ರತೆ ರಹಿತ ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡದಿದ್ದರೆ, ಸಾಲಕ್ಕಾಗಿ ಅಡಮಾನವಿಟ್ಟ ಉದ್ಯಮದ ಉಪಕರಣಗಳನ್ನು ಬ್ಯಾಂಕ್ ಮಟ್ಟುಗೋಲು ಹಾಕಿಕೊಳ್ಳುತ್ತದೆ’ ಎಂದು ಕಿವಿಮಾತು ಹೇಳಿದರು.
ಉತ್ತಮ ವ್ಯವಹಾರಕ್ಕೆ ಸೂತ್ರ: ತಮ್ಮ ಬ್ಯಾಂಕ್ ಖಾತೆಯ ಮೂಲಕ ಹಣ ವ್ಯವಹಾರ ಮಾಡಿ. ಚೆಕ್ ವ್ಯವಹಾರ ಸೂಕ್ತ. ಪ್ರತಿನಿತ್ಯದ ವ್ಯವಹಾರವನ್ನು ದಾಖಲಿಸಿ. ಖರೀದಿ, ಮಾರಾಟಗಳ ರಸೀತಿಯನ್ನು ಇಟ್ಟುಕೊಳ್ಳಬೇಕು. ನಿಗದಿತ ವೇಳೆಯಲ್ಲಿ ಸಾಲ ಮರುಪಾವತಿ ಕಷ್ಟವಾದಾಗ, ಬ್ಯಾಂಕ್ ಅವರಿಗೆ ದಾಖಲೆಗಳನ್ನು ಒದಗಿಸಿದರೆ, ಸಾಲ ಮರುಪಾವತಿಯ ನಿಯಮಗಳನ್ನು ಪುನರ್ ರಚನೆ ಮಾಡಿ, ಸುಲಭವಾಗಿ ಸಾಲ ತೀರಿಸುವ ದಾರಿ ತೋರಿಸಬಹುದು ಎಂದು ಸಲಹೆ ನೀಡಿದರು.
ಮಾಹಿತಿ ಕೇಂದ್ರದ ಅಧಿಕಾರಿ ಎನ್.ಎಸ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮಾಂತರ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಜಿ.ಟಿ.ಕುಮಾರ್, ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಎಸ್.ಎನ್.ಬಸವರಾಜು, ಕೆಎಸ್ಎಫ್ಸಿ ಶಾಖಾ ವ್ಯವಸ್ಥಾಪಕ ಎನ್.ಆರ್.ಭರತ್ ರಾಜ್, ಸರ್ಕಾರಿ ವಿಜ್ಞಾನ ಕಾಲೇಜಿನ ಆಂತರಿಕ ಗುಣಮಟ್ಟ ನಿಯಂತ್ರಣದ ಸಂಚಾಲಕ ಪ್ರೊ.ಕೆ.ಕೆ.ಕಮಾನಿ, ಉಪನ್ಯಾಸ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರ ನಡುವೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.