ಮೂಡುಬಿದಿರೆ: ಚಲನಚಿತ್ರರಂಗದ ಹಿನ್ನೆಲೆಗಾಯಕರಾಗಿ ಪ್ರಸಿದ್ಧಿ ಪಡೆದ ಪದ್ಮಶ್ರೀ ಹರಿಹರನ್ ಅವರಿಗೆ ಆಳ್ವಾಸ್ ವಿರಾಸತ್ 2019 ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಹರಿಹರನ್ ಅನಂತ ಸುಬ್ರಮಣಿಯನ್ ಅವರು 'ಹರಿಹರನ್' ಎಂದೇ ಜನಾನುರಾಗಿದ್ದಾರೆ.
ಗಜಲ್, ಭಕ್ತಿಗೀತೆ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತಗಳಲ್ಲಿ ಅಸಾಧಾರಣ ಪ್ರತಿಭೆಯಾಗಿರುವ ಅವರು ಕನ್ನಡ, ಹಿಂದಿ, ತಮಿಳು, ಮಲೆಯಾಳಂ, ತೆಲುಗು ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕರಾಗಿ ಮಿಂಚಿದವರು.
ದೇಶ ವಿದೇಶಗಳಲ್ಲು ಹಿನ್ನೆಲೆ ಗಾಯಕರಾಗಿ, ಸಂಗೀತ ಸಂಯೋಜಕರಾಗಿ ಹೆಸರು ಪಡೆದಿದ್ದಾರೆ. 25ನೇ ವರ್ಷದ ಅಳ್ವಾಸ್ ವಿರಾಸತ್ ಜನವರಿ 4,5,6ರಂದು ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯಲಿದ್ದು ಅಂದು ಹರಿಹರನ್ ಅವರಿಗೆ ರೂ ಒಂದು ಲಕ್ಷ ನಗದಿನೊಂದಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.