ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರು ‘ಡಿಪಿ’ ಬದಲಾಯಿಸುವ ಬದಲಾಗಿ ದೇಶದ ‘ಜಿಡಿಪಿ’ ಬದಲಾಯಿಸಬೇಕು ಎಂದು ಸಿಪಿಐ ಮುಖಂಡ ವಿ.ಕುಕ್ಯಾನ್ ಹೇಳಿದರು.
ಬಂಟ್ವಾಳದಲ್ಲಿ ಮಂಗಳವಾರ ನಡೆದ ಸಿಪಿಐ ತಾಲ್ಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಅಸಂಬದ್ಧ ಹೇಳಿಕೆಗಳ ಮೂಲಕ ಜನರ ಹಾದಿ ತಪ್ಪಿಸಲು ಯತ್ನಿಸುತ್ತಿದೆ. ದೇಶದಲ್ಲಿ 75 ವರ್ಷಗಳಿಂದಲೂ ಜನತೆ ರಾಷ್ಟ್ರಧ್ವಜಕ್ಕೆ ಗೌರವ ನೀಡುತ್ತಲೇ ಬಂದಿದ್ದಾರೆ. ಪ್ರತಿ ಮನೆಯಲ್ಲಿ ಬಳಸಲು ತಯಾರಿಸಿದ ರಾಷ್ಟ್ರಧ್ವಜ ಕೆಲವೊಂದು ಲೋಪಗಳಿಂದ ಕೂಡಿದ್ದು, ಇದರಿಂದ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ ಎಂದು ಟೀಕಿಸಿದರು.
ಪುರಸಭೆ ಮಾಜಿ ಸದಸ್ಯ ಭೋಜ ಕರಂಬೆರ ಧ್ವಜಾರೋಹಣ ನೆರವೇರಿಸಿದರು. ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್, ಸಿಪಿಐ ಮುಖಂಡ ಬಿ.ಬಾಬು ಭಂಡಾರಿ, ಪ್ರಮುಖರಾದ ಪ್ರೇಮನಾಥ ಕೆ., ಕುಸುಮಾ, ರಾಜೀವ ಪೂಜಾರಿ ಇದ್ದರು.
ಸಿಪಿಐ ಕಾರ್ಯದರ್ಶಿ ಬಿ.ಶೇಖರ್ ಲೆಕ್ಕಪತ್ರ ಮಂಡಿಸಿದರು. ಪ್ರತಿನಿಧಿಗಳಾದ ವಿಶ್ವನಾಥ ಕಳ್ಳಿಗೆ, ಬಿ. ಎಂ. ಹಸೈನಾರ್ ವಿಟ್ಲ, ಬಿ.ಬಾಬು ಭಂಡಾರಿ, ಭಾರತಿ ಚರ್ಚೆಯಲ್ಲಿ ಪಾಲ್ಗೊಂಡರು.
ಇದೇ ವೇಳೆ 15 ಮಂದಿ ಸದಸ್ಯರ ನೂತನ ಸಮಿತಿ ರಚನೆ ಮತ್ತು 12 ಪ್ರಮುಖ ಬೇಡಿಕೆಗಳ ನಿರ್ಣಯ ಮಂಡಿಸಲಾಯಿತು.