ವಿಟ್ಲ: ಪರಸ್ಪರ ಕ್ಷಮಿಸಿ, ಪ್ರೀತಿ ವಿಶ್ವಾಸದಿಂದ ಬಾಳುವುದೇ ನಿಜವಾದ ಕ್ರಿಸ್ಮಸ್ ಎಂದು ಸೂರಿಕುಮೇರು ಸಂತ ಜೋಸೆಫ್ ಚರ್ಚ್ನ ಧರ್ಮಗುರು ಫಾದರ್ ಗ್ರೆಗರಿ ಪಿರೇರಾ ಹೇಳಿದರು.
ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ ಅವರ ಆದೇಶದಂತೆ ಸೂರಿಕುಮೇರು ಸಂತ ಜೋಸೆಫ್ ಚರ್ಚ್ನಲ್ಲಿ ಸರಳ ರೀತಿಯಲ್ಲಿ ಆಚರಿಸಲಾದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶೇಷ ಬಲಿ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಮನುಕುಲದ ಉದ್ಧಾರಕ್ಕಾಗಿಯೇ ಭೂಮಿ ಬಂದ ಪ್ರಭು ಯೇಸು ಕ್ರಿಸ್ತರು ನಡೆದ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಮನಸ್ಸಿನಲ್ಲಿ ದ್ವೇಷ, ಕೋಪ, ಮತ್ಸರ, ಅಹಂಕಾರ, ಸ್ವಾರ್ಥ ಜೀವನ ತ್ಯಜಿಸಿ ಒಬ್ಬರಿಗೊಬ್ಬರು ಹೊಂದಾಣಿಕೆ ನಡೆಸಿ ಜೀವನ ನಡೆಸಬೇಕು ಎಂದು ಹೇಳಿದರು.
ಕ್ರಿಸ್ಮಸ್ ಬಲಿ ಪೂಜೆ ಸಮಯದಲ್ಲಿ ಚರ್ಚ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೋಸ್ಕರ ವಿಶೇಷವಾಗಿ ಪ್ರಾರ್ಥಿಸಿ ಎಲ್ಲರಿಗೂ ಆರ್ಶೀರ್ವಾದ ನೀಡಿದರು. ಬಲಿ ಪೂಜೆ ಬಳಿಕ ಸೂರಿಕುಮೇರು ಚರ್ಚ್ ವ್ಯಾಪ್ತಿಗೆ ಒಳಪಟ್ಟ ಕ್ರೈಸ್ತ ವಿದ್ಯಾರ್ಥಿಗಳಿಂದ ಕ್ರಿಸ್ಮಸ್ ಹಬ್ಬಕ್ಕೆ ಸಂಬಂಧವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪಾಲನಾ ಸಮಿತಿ ಉಪಾಧ್ಯಕ್ಷ ಎಲಿಯಾಸ್ ಪಿರೇರಾ, ಕಾರ್ಯದರ್ಶಿ ಮೇರಿ ಡಿಸೋಜ, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ನ್ಯಾನ್ಸಿ, ಚರ್ಚ್ ಮುಖಂಡರಾದ ಸ್ಟೀವನ್ ಆಲ್ವಿನ್ ಪಾಯ್ಸ್ ಮತ್ತು ಅನಿತಾ ಮಾರ್ಟಿಸ್ ಇದ್ದರು.
ಭಾರತೀಯ ಕಥೋಲಿಕ ಯುವ ಸಂಚಾಲನ ಸೂರಿಕುಮೇರು ಬೊರಿಮರ್ ಘಟಕದ ಸದಸ್ಯೆ ಆಲಿಫಿಯಾ ಲಿಯೊನ್ನಾ ಪಿರೇರಾ ಹಾಗೂ ವೈ.ಸಿ.ಎಸ್. ಅಧ್ಯಕ್ಷೆ ಶಾಲನ್ ರೀಯಾ ಮಾರ್ಟಿಸ್ ನಿರೂಪಿಸಿದರು.