ಬೆಳ್ತಂಗಡಿ: ತಾಲ್ಲೂಕಿನ ನಾವೂರು ಅಂಬನ್ ಕೆರೆಯ ಬೇಬಿ ಯಾನೆ ಯೋಹನ್ನಾನ್ (72) ಎಂಬವರನ್ನು ಅವರ ಪತ್ನಿ ನಲ್ಲಮ್ಮ ಯಾನೆ ಎಲಿಯಮ್ಮ (65) ಕತ್ತಿಯಿಂದ ತಲೆಗೆ ಕಡಿದು ಹತ್ಯೆ ಮಾಡಿದ್ದಾರೆ.
ಎಲಿಯಮ್ಮ ಕೈಗೆ ಗಾಯವಾಗಿದ್ದನ್ನು ಕಂಡ ಪಕ್ಕದ ಮನೆಯ ಮ್ಯಾಥ್ಯೂ ಎಂಬವರು ವಿಚಾರಿಸಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಬಳಿಕ ಆಕೆ ಫಾದರ್ ಹಾಗೂ ಇತರರಿಗೂ ಕರೆ ಮಾಡಿ ತಿಳಿಸಿದ್ದಾರೆ ಎನ್ನಲಾಗಿದೆ.
2013ರಿಂದ ಎಲಿಯಮ್ಮರಿಗೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ವೈದ್ಯರ ಸಲಹೆಯಂತೆ ಮತ್ತೆ ಚಿಕಿತ್ಸೆಗೆ ಕರೆದೊಯ್ಯುಲು ತಯಾರಿ ಮಾಡಿದ್ದರು. ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ಎಲಿಯಮ್ಮ ಭಾನುವಾರ ಸಂಜೆ ಸಮೀಪದ ಅಂಗಡಿಗೆ ಹೋಗಿ ಎಲಿ ಪಾಷಾಣ ಕೇಳಿದ್ದರು ಎನ್ನಲಾಗಿದೆ. ಎಲಿಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ಸ್ಪೆಕ್ಟರ್ ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ನಂದಕುಮಾರ್, ಬೆರಳಚ್ಚು ವಿಭಾಗ ಡಿವೈಎಸ್ಪಿ ಗೌರೀಶ್ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೃಷ್ಟಿ ದೋಷ: ಕೆರೆಗೆ ಬಿದ್ದು ಸಾವು
ಪುತ್ತೂರು: ದೃಷ್ಟಿ ಸಮಸ್ಯೆ ಹೊಂದಿದ್ದ ಕಡಬ ತಾಲ್ಲೂಕಿನ ಬೆಳಂದೂರು ಗ್ರಾಮದ ಕೆಲೆಂಬಿರಿ ನಿವಾಸಿ ನಾರಾಯಣ ಆಚಾರ್ಯ (66) ತಮ್ಮ ತೋಟದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಭಾನುವಾರ ಮಧ್ಯಾಹ್ನದಿಂದ ಅವರು ನಾಪತ್ತೆಯಾಗಿದ್ದರು. ಸೋಮವಾರ ರಾತ್ರಿ ಅವರ ಮೃತದೇಹ ಮನೆಯ ಪಕ್ಕದ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರು- ಲಾರಿ ಡಿಕ್ಕಿ
ಕಾಸರಗೋಡು: ಕುಂಬಳೆ ರೈಲು ನಿಲ್ದಾಣ ಬಳಿ ಕಾರು ಮತ್ತು ಮಿನಿ ಲಾರಿ ಡಿಕ್ಕಿಯಾಗಿವೆ. ಯಾರಿಗೂ ಗಾಯಗಳಾಗಿಲ್ಲ. ಮಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಕಾರು ಮತ್ತು ಹಿಂಬದಿಯಿದ ಬರುತ್ತಿದ್ದ ಮಿನಿಲಾರಿ ಡಿಕ್ಕಿಯಾಗಿದ್ದವು.
ಕಾಳುಮೆಣಸು ಕಳವು: ಬಂಧನ
ಪುತ್ತೂರು: ತಾಲ್ಲೂಕಿನ
ಕೊಳ್ತಿಗೆ ಗ್ರಾಮದ ಕುದ್ಕುಳಿ ಎಂಬಲ್ಲಿರುವ ಮಹಮ್ಮದ್ ಶಾಫಿ ಎಂಬವರ ತೋಟದ ಗೋದಾಮುನಿಂದ 10 ಗೋಣಿ ಚೀಲದಲ್ಲಿದ್ದ ಸುಮಾರು 250 ಕೆ.ಜಿ. ಕಾಳು ಮೆಣಸು ಕಳವು ಮಾಡಿದ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಸುಳ್ಯ ತಾಲ್ಲೂಕು ಜಾಲ್ಸೂರು ಗ್ರಾಮದ ಕಳಂಜಿದ ಮಂಜು ಬಿ, ಕೊಡಿಯಬೈಲು ಪ್ರವೀಣ, ಬೇರ್ಪಡ್ಕದ ಪವನ್ ಕುಮಾರ್, ಕೊಳ್ತಿಗೆ ಗ್ರಾಮದ ನೀಟಡ್ಕದ ಅಬ್ದುಲ್ ಬಾಶೀರ್ ಬಂಧಿತರು. ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಇದ್ದಾನೆ.
ಆರೋಪಿ ಪವನ್ ಕುಮಾರನ ಮನೆಯಲ್ಲಿ ಕಳವು ಮಾಡಿ ಬಚ್ಚಿಟ್ಟಿದ್ದ ₹1.18 ಲಕ್ಷ ಮೌಲ್ಯದ ಕಾಳು ಮೆಣಸು ಹಾಗೂ ಈ ಕಾಳುಮೆಣಸು ಸಾಗಾಣೆಗೆ ಬಳಸಿದ ಸುಮಾರು ₹60 ಸಾವಿರ ಮೌಲ್ಯದ ಕಾರನ್ನು ಸ್ವಾಧೀನ ಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.