ಉಜಿರೆ: ‘ಹಸಿವು, ಬಡತನ, ಅನಾರೋಗ್ಯ, ಅನಕ್ಷರತೆಯಿಂದ ನೊಂದು ಬೆಂದವರ ಸೇವೆಯನ್ನು ಮಾನವೀಯತೆಯಿಂದ ಮಾಡಬೇಕು’ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಮೈಸೂರಿನ ಪ್ರೊ. ಜೋಸೆಫ್ ಮ್ಯಾಥ್ಯೂ ಹೇಳಿದರು.
ಅವರು ಗುರುವಾರ ಉಜಿರೆಯಲ್ಲಿ ಶಾರದಾ ಮಂಟಪದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಉತ್ತಮ ಮಾನವೀಯ ಸಂಬಂಧ ಬೆಳೆಸಿಕೊಳ್ಳಬೇಕು. ತನ್ಮೂಲಕ ಆರೋಗ್ಯಪೂರ್ಣ ಆದರ್ಶ ಸಮಾಜ ನಿರ್ಮಾಣವಾಗುತ್ತದೆ. ರೋಟರಿ ಕ್ಲಬ್ನಲ್ಲಿ ಪ್ರತಿ ವರ್ಷ ಅಧ್ಯಕ್ಷರ ಬದಲಾವಣೆ ಆಗುವುದರಿಂದ ನೂತನ ಅಧ್ಯಕ್ಷರು ಪ್ರಗತಿಪರವಾದ ಹೊಸ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
ರೋಟರಿ ಜಿಲ್ಲಾ ಉಪರಾಜ್ಯಪಾಲ ಎನ್. ಪ್ರಕಾಶ್ ಕಾರಂತ್ ಶುಭಾಶಂಸನೆ ಮಾಡಿ. ರೋಟರಿ ಕ್ಲಬ್ ಜಗತ್ತಿನ ಅತಿ ದೊಡ್ಡ ಸೇವಾ ಸಂಸ್ಥೆಯಾಗಿ ಅನೇಕ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದರು.
ಯು. ವಿಜಯ ರಾಘವ ಪಡ್ವೆಟ್ನಾಯ ನೂತನ ಸದಸ್ಯರಿಗೆ ಶುಭ ಹಾರೈಸಿದರು. ನಾವೂರಿನ ಡಾ. ಪ್ರದೀಪ್.ಎ, ಕವನ ರೂಪದಲ್ಲಿ ಸುಶ್ರಾವ್ಯವಾಗಿ ಹಾಡಿ ರೋಟರಿ ಕ್ಲಬ್ನ ಗತ ವರ್ಷದ ವರದಿಯನ್ನು ಸಾದರಪಡಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸೇವೆ-ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ನರ್ಸಿಂಗ್ ವಿದ್ಯಾರ್ಥಿನಿ ಆಶಾ ಎಂಬುವರಿಗೆ ಕಾಲೇಜು ಶುಲ್ಕ ₹20 ಸಾವಿರ ಮೊತ್ತದ ನೆರವು ನೀಡಲಾಯಿತು.
ಬೆಳ್ತಂಗಡಿ ರೋಟರಿ ಕ್ಲಬ್ನ ನೂತನ ಅಧ್ಯಕ್ಷ ಜಗದೀಶ್ ಪ್ರಸಾದ್ ಮಾತನಾಡಿ, ‘ಶುದ್ಧ ಕುಡಿಯುವ ನೀರು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ, ಪರಿಸರ ಸಂರಕ್ಷಣೆ , ಸೇವಾ ಕಾರ್ಯಗಳನ್ನು ಅಂಗನವಾಡಿಗಳ ಮೂಲಕ ಅನುಷ್ಠಾನಗೊಳಿಸಲಾಗುವುದು’ ಎಂದರು. ಡಾ. ಸುಧೀರ್ ಪ್ರಭು ಇದ್ದರು.