ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವಕೀಲರು ಸರಿ ವಾದ ಮಾಡರು

Last Updated 30 ಮಾರ್ಚ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ವಕೀಲರು ನ್ಯಾಯಾಲಯಗಳಲ್ಲಿ ಸರಿಯಾಗಿ ವಾದ ಮಾಡುವುದಿಲ್ಲ. ಆದ್ದರಿಂದ, ಖಾಸಗಿ ವಕೀಲರನ್ನು ನೇಮಿಸಿಕೊಳ್ಳಲು ಅನುಮತಿ ನೀಡಬೇಕು’ ಎಂದು ವಿಧಾನಸಭೆ ಸಚಿವಾಲಯ ಕಾರ್ಯದರ್ಶಿ ಎಸ್‌.ಮೂರ್ತಿ ಕಾನೂನು ಮತ್ತು ಹಣಕಾಸು ಇಲಾಖೆಗಳಿಗೆ ಪತ್ರ ಬರೆದಿದ್ದಾರೆ.

ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಹಲವು ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಸಚಿವಾಲಯದ ಪರವಾಗಿ ವಾದಿಸಲು ಸರ್ಕಾರಿ ವಕೀಲರ ಬದಲಿಗೆ ಖಾಸಗಿ ವಕೀಲರನ್ನು ನೇಮಿಸಿಕೊಳ್ಳಬೇಕೆಂಬುದು ಮೂರ್ತಿಯವರ ಉದ್ದೇಶವಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಕಾನೂನು ಮತ್ತು ಹಣಕಾಸು ಇಲಾಖೆಗೆ ಮೂರ್ತಿ ಬರೆದಿರುವಪತ್ರದ ಟಿಪ್ಪಣಿ ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಅದರ ಸಾರಾಂಶ ಈ ರೀತಿ ಇದೆ–

‘ವಿಧಾನಸಭೆ ಸಚಿವಾಲಯದಲ್ಲಿ ವಿವಿಧ ವೃಂದಗಳಲ್ಲಿ ತೆರವಾಗಿದ್ದ ಹುದ್ದೆಗಳಿಗೆ ಸರ್ಕಾರಿ ಸೇವಾ ನಿಯಮಾವಳಿ ಮಾರ್ಗಸೂಚಿಯಂತೆ ನೇಮಕ ಮಾಡಲಾಗಿದೆ. ಆಯ್ಕೆಗೊಳ್ಳದ ಕೆಲವು ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆ ಪ್ರಶ್ನಿಸಿ ರಾಜ್ಯ ಹೈಕೋರ್ಟ್‌, ಧಾರವಾಡ ಮತ್ತು ಗುಲ್ಬರ್ಗಾ ಪೀಠಗಳ ಮುಂದೆ ದಾವೆ ಹೂಡಿದ್ದಾರೆ’.

‘ಕರ್ನಾಟಕ ಸರ್ಕಾರದ ವಕೀಲರು ಈ ಪ್ರಕರಣಗಳ ಬಗ್ಗೆ ವಾದ ಮಾಡಬಹುದು. ಆದರೆ, ಅವರು ಪ್ರಕರಣಗಳನ್ನು ಸರಿಯಾಗಿ ಅಧ್ಯಯನ ಮಾಡುವುದಿಲ್ಲ ಮತ್ತು ಮಾಹಿತಿ ಸಂಗ್ರಹಿಸುವುದಿಲ್ಲ. ಇವರಿಗೆ ಸಚಿವಾಲಯದ ಅಧಿಕಾರಿಗಳ ಸಂಪರ್ಕ ಇಲ್ಲದ ಕಾರಣ ನ್ಯಾಯಾಲಯಗಳಲ್ಲಿ ಸರಿಯಾಗಿ ವಾದ ಮಂಡಿಸಲು ಸಾಧ್ಯವಾಗುವುದಿಲ್ಲ. ಹೊಸದಾಗಿ ನೇಮಕವಾದ ಅಭ್ಯರ್ಥಿಗಳ ಹಿತ ರಕ್ಷಣೆಗಾಗಿ, ಸಚಿವಾಲಯ ಮುನ್ನೆಚ್ಚರಿಕೆ ವಹಿಸಬೇಕಾಗಿದೆ’
ಎಂದು ಮೂರ್ತಿ ಪತ್ರದಲ್ಲಿ ಅವರು ಹೇಳಿದ್ದಾರೆ.

‘ಸಚಿವಾಲಯದ ಕೆಲವು ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಇರುವ ಆರೋಪಗಳ ಬಗ್ಗೆ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು. ಇದರ ವಿಚಾರಣೆಗೆ ನಿವೃತ್ತ
ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಲಾಗಿತ್ತು. ಈ ಕ್ರಮವನ್ನು ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ಈ ಪ್ರಕರಣಗಳಲ್ಲೂ ಸರ್ಕಾರಿ ವಕೀಲರು ಸರಿಯಾಗಿ ವಾದಿಸುತ್ತಿಲ್ಲ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

‘ಇವೆಲ್ಲ ಕಾರಣಗಳಿಂದಾಗಿ ಇನ್ನು ಮುಂದೆ ಕರ್ನಾಟಕ ವಿಧಾನಸಭೆ ಸಚಿವಾಲಯಕ್ಕೆ ಸಂಬಂಧಿಸಿದಂತೆ ಯಾವುದೇ ಸ್ವರೂಪದ ದಾವೆಗಳು ನ್ಯಾಯಾಲಯದಲ್ಲಿ ದಾಖಲಾದರೆ, ಖಾಸಗಿ ವಕೀಲ ಪ್ರಮೋದ್‌ ಕಥಾವಿಯನ್ನು ಸಚಿವಾಲಯ ಪ್ರತಿನಿಧಿಸಲು ಅನುಮೋದನೆ ನೀಡಬೇಕು. ಈ ವಕೀಲರಿಗೆ ಸರ್ಕಾರಿ ವಕೀಲರಿಗೆ ನೀಡುವ ದರದಲ್ಲಿ ಅಥವಾ ವಕೀಲರು ಬಯಸುವ ದರದಲ್ಲಿ ಅಥವಾ ಕಾರ್ಯದರ್ಶಿಯವರು ವಕೀಲರನ್ನು ಒಪ್ಪಿಸಿ ನಿಗದಿ ಮಾಡಿದ ದರದಲ್ಲಿ ಶುಲ್ಕ ಪಾವತಿಸಲು ಅನುಮೋದನೆ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ನೇಮಕಕ್ಕೆ ಅಸ್ತು: ಸಚಿವಾಲಯ ಕಾರ್ಯದರ್ಶಿ ಮೂರ್ತಿ ಅವರ ಕೋರಿಕೆಗೆ ಹಣಕಾಸು ಮತ್ತು ಕಾನೂನು ಇಲಾಖೆ ಒಪ್ಪಿಗೆ ಸೂಚಿಸಿದೆ.

ಇದನ್ನು ಆಧರಿಸಿ ಆದೇಶ ಹೊರಡಿಸಿರುವ ಅಧೀನ ಕಾರ್ಯದರ್ಶಿ ಎಚ್‌.ಎಸ್‌.ಕಸ್ತೂರಿ, ‘ಖಾಸಗಿ ವಕೀಲರನ್ನು ನೇಮಿಸಿಕೊಳ್ಳಬಹುದು ಎಂದು ಕಾನೂನು ಇಲಾಖೆ ಅಭಿಪ್ರಾಯ ನೀಡಿದೆ. ಪ್ರಮೋದ್‌ ಕಥಾವಿಯವರನ್ನು ತಕ್ಷಣದಿಂದಲೇ ನೇಮಕ ಮಾಡಬಹುದು’ ಎಂದು ತಿಳಿಸಿದ್ದಾರೆ.

ಆಕ್ಷೇಪ: ಖಾಸಗಿ ವಕೀಲ ಪ್ರಮೋದ್‌ ಕಥಾವಿ ಈಗಾಗಲೇ ಬೇರೆ ಎರಡು ಪ್ರಕರಣಗಳಲ್ಲಿ ಸಚಿವಾಲಯದ ವಿರುದ್ಧವೇ ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದಾರೆ. ಈಗ  ಹೊಸಪ್ರಕರಣಗಳಲ್ಲಿ ಸಚಿವಾಲಯದ ಪರವಾಗಿವಾದ ಮಾಡಲು ಮುಂದಾದರೆ, ಹಿತಾಸಕ್ತಿ ಸಂಘರ್ಷ ಉಂಟಾಗುವುದಿಲ್ಲವೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.

ಸಚಿವಾಲಯದಲ್ಲಿ ನಡೆದ ಅಕ್ರಮ ನೇಮಕಾತಿಯನ್ನು ಸಕ್ರಮಗೊಳಿಸುವ ಸಲುವಾಗಿ ಇಂತಹ ಅಡ್ಡದಾರಿಯನ್ನು ಹಿಡಿದಿರುವ ಸಾಧ್ಯತೆ ಇದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

‘ವಕೀಲರನ್ನು ನೇಮಿಸಿಕೊಳ್ಳಬಹುದು’

‘ಸ್ಪೀಕರ್‌ ಕಚೇರಿ ಖಾಸಗಿ ವಕೀಲರನ್ನು ನೇಮಿಸಿಕೊಳ್ಳಲು ಸ್ವತಂತ್ರರಿದ್ದಾರೆ. ನನ್ನ ಅಭಿಪ್ರಾಯ ಕೇಳಿದ್ದಾರೆ. ಒಪ್ಪಿಗೆ ನೀಡಿದ್ದೇನೆ’ ಎಂದು ಅಡ್ವೊಕೇಟ್‌ ಜನರಲ್‌ ಎಂ.ಆರ್‌. ನಾಯ್ಕ್ ತಿಳಿಸಿದ್ದಾರೆ.

‘ಸ್ವೀಕರ್‌ ಕಚೇರಿ ಮತ್ತು ಲೋಕಾಯುಕ್ತ ಸ್ವತಂತ್ರ ಸಂಸ್ಥೆಗಳು. ಸರ್ಕಾರಿ ವಕೀಲರು ಬೇಡ ಎನ್ನುವುದಾದರೆ, ಖಾಸಗಿಯವರನ್ನು ನೇಮಿಸಿಕೊಳ್ಳಬಹುದು. ವಕೀಲರು ಕೇಳುವ ಶುಲ್ಕಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆ ಬೇಕಾಗುತ್ತದೆ’ ಎಂದು ಅವರು ಹೇಳಿದರು.

ಪ್ರಕರಣ ಏನು?

ವಿಧಾನಸಭೆ ಸಚಿವಾಲಯದ  ‘ಬಿ’, ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಿಗೆ ಡಿಸೆಂಬರ್‌ನಲ್ಲಿ ಅರ್ಜಿ ಕರೆಯಲಾಗಿತ್ತು. ಅರ್ಜಿ ಕರೆದದ್ದು 90 ಹುದ್ದೆಗಳಿಗಾದರೂ ಸುಮಾರು 160 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು.  ಈ ನೇಮಕಾತಿಗೊಂಡವರಲ್ಲಿ ಹೆಚ್ಚಿನವರು ಮುಖ್ಯಮಂತ್ರಿ, ಸ್ಪೀಕರ್‌, ಸಚಿವಾಲಯದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು  ಮುಖ್ಯ ಸಚೇತಕರ ಹತ್ತಿರದವರು ಮತ್ತು ಬಂಧುಗಳೇ ಆಗಿದ್ದರು.

ವಿಧಾನಸಭೆ ಸಚಿವಾಲಯದ ವಿವಿಧ ವೃಂದಗಳ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಹೈದರಾಬಾದ್‌– ಕರ್ನಾಟಕ
ದವರಿಗೆ 371 (ಜೆ) ಅನ್ವಯ ಶೇ 8 ರಷ್ಟು ಮೀಸಲು ಕಡ್ಡಾಯ. ಆದರೆ, ಈ ನೇಮಕಾತಿಯಲ್ಲಿ ಅದನ್ನು ಪಾಲಿಸಿಲ್ಲ. ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವಾಗ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಬೇಕು. ಆದರೆ, ಅವರಿಂದಲೂ ಶುಲ್ಕ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT