ಮಂಗಳೂರು: ಪಠ್ಯಪುಸ್ತಕ ಮರು ಪರಿಷ್ಕರಣೆ ವೇಳೆ ನಾರಾಯಣ ಗುರುಗಳ ಹೆಸರನ್ನು ಕೈ ಬಿಟ್ಟಿರುವುದು ದಾರ್ಶನಿಕನಿಗೆ ಮಾಡಿದ ಅಪಮಾನವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯ ಪಟ್ಟರು.
ಶುಕ್ರವಾರ ಇಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣ ಗುರುಗಳ ಹೆಸರನ್ನು ಪಠ್ಯ ಪುಸ್ತಕದಿಂದ ಕೈ ಬಿಡಲಾಗಿದೆ ಎಂಬುದು ಕಾಂಗ್ರೆಸ್ ನ ಅಪಪ್ರಚಾರ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಮಾಧ್ಯಮದವರು, ಚಿಂತಕರು ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾರಾಯಣ ಗುರುಗಳ ಅನುಯಾಯಿಗಳು ಹೆಚ್ಚು ಇದ್ದಾರೆ. ಇವರದೇಸಮುದಾಯಕ್ಕೆ ಸೇರಿದ ಇಬ್ಬರು ಸಚಿವರು ಇದೇ ಜಿಲ್ಲೆಯವರಾಗಿದ್ದಾರೆ. ಇಂತಹ ಪ್ರಮಾದ ನಡೆದಿದ್ದರೆ ಈ ಇಬ್ಬರು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪರಧರ್ಮ ಸಹಿಷ್ಣುತೆ, ಸರ್ವ ಜನಾಂಗದ ಶಾಂತಿಯ ತೋಟ ಆಗಿರುವ ಕರ್ನಾಟಕದಲ್ಲಿ ಸಾಮರಸ್ಯ ಕ್ಕೆ ಕುಂದು ತರುವ ವಿಚಾರವನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವುದು ಘೋರ ಅಪರಾಧವಾಗಿದೆ. ಗಾಂಧೀಜಿ ಹತ್ಯೆ ಮಾಡಿರುವ ನಾಥೂರಾಮ ಗೋಡ್ಸೆ ಬಗ್ಗೆಯಾಗಲಿ, ಹೆಡಗೇವಾರ್ ಬಗ್ಗೆಯಾಗಲಿ ಬಿಜೆಪಿಯವರು ವೇದಿಕೆಯಲ್ಲಿ ಮಾತನಾಡಿಕೊಳ್ಳಲಿ. ಆದರೆ ಸಣ್ಣಮಕ್ಕಳು ಓದುವ ಪಠ್ಯದಲ್ಲಿ ಇಂತಹ ವಿಚಾರ ಸೇರಿಸುವುದರ ಹಿಂದೆ ದುರುದ್ದೇಶ ಇದೆ ಎಂದು ಆರೋಪಿಸಿದರು.
ಈ ಹಿಂದೆ ಗಣರಾಜ್ಯೋತ್ಸವ ದ ಪರೇಡ್ ನಲ್ಲಿ ನಾರಾಯಣ ಗುರುಗಳ ಸ್ಥಬ್ದಚಿತ್ರವನ್ನು ಸರ್ಕಾರ ಕೈ ಬಿಟ್ಟಿತ್ತು. ಈಗ ಪಠ್ಯದಲ್ಲಿ ಇವರ ವಿಚಾರ ಕೈ ಬಿಟ್ಟಿರುವುದು ಹಿಂದುಳಿದವರಿಗೆ ಮಾತ್ರವಲ್ಲ, ಇಡೀ ಮಾನವ ಸಮಾಜಕ್ಕೆ ಮಾಡಿದ ಅವಮಾನವಾಗಿದೆ. ಬಿಜೆಪಿ ಹಿಂದುಳಿದ ವರ್ಗಗಳ ವಿರೋಧಿ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು.
ಮಂಗಳೂರು ರೈಲ್ವೆ ನಿಲ್ದಾಣಕ್ಕೆ ನಾರಾಯಣಗುರು ಹೆಸರು ಇಡಬೇಕು ಎಂಬ ಹಳೆಯ ಪ್ರಸ್ತಾವವನ್ನು ಕೂಡ ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.