ಹೊನ್ನಾಳಿ: ತಾಲ್ಲೂಕಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಅಂತರ ಜಿಲ್ಲಾಮಟ್ಟದ ಮುಕ್ತ ಚದುರಂಗ ಸ್ಪರ್ಧೆಯನ್ನು ಪಟ್ಟಣದ ಗುರುಭವನದಲ್ಲಿ ಶನಿವಾರ ಏರ್ಪಡಿಸಲಾಗಿತ್ತು.
ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯಿಂದ 12 ಸ್ಪರ್ಧಿಗಳು ಭಾಗವಹಿಸಿದ್ದರು. ಅತ್ಯಂತ ಉನ್ನತ ಶ್ರೇಯಾಂಕ ಹೊಂದಿರುವ ಆಟಗಾರ ಎಸ್.ಎಂ. ಅಜಯ್ ಶಿವಮೊಗ್ಗ (1660) ಭಾಗವಹಿಸಿದ್ದರು.
ಅದೇ ರೀತಿ 16 ವರ್ಷ ವಯಸ್ಸಿನ ಒಳಗಿನ ಬಾಲಕ ಮತ್ತು ಬಾಲಕಿಯರಿಗೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ 20 ಕ್ರೀಡಾಪಟುಗಳು ಭಾಗವಹಿಸಿದ್ದರು.
ಅತ್ಯಂತ ಉನ್ನತ ಮಟ್ಟದ ಶ್ರೇಯಾಂಕ ಹೊಂದಿರುವ ಆಟಗಾರ್ತಿ ವರುದಿನಿ ಪಕ್ಕಿ ( 1204) ಹಾಗೂ ದಾವಣಗೆರೆಯ ಎಂ.ಎಸ್. ಧನುಶ್ 2ನೇ ಶ್ರೇಯಾಂಕದ ಆಟಗಾರ ಭಾಗವಹಿಸಿದ್ದು ವಿಶೇಷವಾಗಿತ್ತು. ಅಂತರರಾಷ್ಟ್ರೀಯ ಚೆಸ್ ತೀರ್ಪುಗಾರ ಮಂಜುನಾಥ್ ಶಿವಮೊಗ್ಗ ಪಂದ್ಯಗಳನ್ನು ನಡೆಸಿಕೊಟ್ಟರು.
ಹೊನ್ನಾಳಿಯ ಅಂತರರಾಷ್ಟ್ರೀಯ ಚೆಸ್ ಆಟಗಾರ ಎಚ್.ಎಂ. ಹಾಲೇಶ್ವರಯ್ಯ (1076) ಅವರು ಈ ಪಂದ್ಯಾವಳಿಗಳನ್ನು ಏರ್ಪಡಿಸಿದ್ದರು.
ವಿಜೇತರಿಗೆ ಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಗಳ ನೆನಪಿನ ಟ್ರೋಫಿಯನ್ನು ನೀಡಿ ನಗದು ಬಹುಮಾನದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ತಹಶೀಲ್ದಾರ್ ಡಾ. ನಾಗವೇಣಿ ಈ ಪಂದ್ಯಾವಳಿಗಳನ್ನು ಉದ್ಘಾಟಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.