ಬಜಪೆ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯು ಇಲ್ಲಿನ ಚರಂಡಿ ಅವ್ಯವಸ್ಥೆಯನ್ನು ತೆರೆದು ತೋರಿಸಿದೆ. ಇಲ್ಲಿ ಪ್ರಮುಖ ರಸ್ತೆಗಳ ಬದಿಯಲ್ಲಿ ಚರಂಡಿ ಇಲ್ಲದೇ ಇರುವುದರಿಂದ ರಸ್ತೆಯ ಮೇಲೆಲ್ಲ ಮಣ್ಣು ತುಂಬಿಕೊಂಡಿದೆ.
ಜೋರು ಮಳೆ ಬರುವಾಗ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಅದರೊಂದಿಗೆ ಬಂದ ಮಣ್ಣು ಅಲ್ಲೇ ಉಳಿಯುತ್ತದೆ. ಕಟೀಲಿನಿಂದ ಬಜಪೆ ಕಡೆಗೆ ಹೋಗುವ ರಾಜ್ಯ ಹೆದ್ದಾರಿ 67ರ ಎಕ್ಕಾರು ಪೇಟೆಯಲ್ಲಿ ಮಳೆನೀರು ಮತ್ತು ಮಣ್ಣು ಮುಖ್ಯ ರಸ್ತೆಯ ಮೇಲೆ ತುಂಬಿಕೊಂಡು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
‘ಎಕ್ಕಾರು ಪೇಟೆಯ ಭಜನಾ ಮಂದಿರದ ಸಮೀಪವೂ ರಸ್ತೆ ಮೇಲೆ ನೀರು ನಿಲ್ಲುತ್ತದೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಸಂಬಂಧಪಟ್ಟವರು ಗಮನ ಹರಿಸಲಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.