ಬಂಟ್ವಾಳ (ದಕ್ಷಿಣ ಕನ್ನಡ): ಇಲ್ಲಿನ ಬಿ.ಸಿ.ರೋಡ್ ಸಮೀಪದ ಕೈಕಂಬ ಎಂಬಲ್ಲಿ ಸಮವಸ್ತ್ರ ಧರಿಸದ ಬಗ್ಗೆ ಸಂಚಾರ ಠಾಣೆ ಪೊಲೀಸರು ವಿಚಾರಿಸುತ್ತಿದ್ದ ವೇಳೆ ರಿಕ್ಷಾ ಚಾಲಕನೊಬ್ಬ ಪೆಟ್ರೋಲ್ ಸುರಿದು ತನ್ನ ರಿಕ್ಷಾಗೆ ಬೆಂಕಿ ಹಚ್ಚಲು ಮುಂದಾಗಿ ಸೋಮವಾರ ರಂಪಾಟ ನಡೆಸಿದ್ದಾನೆ.
ಇಲ್ಲಿನ ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ರಂಪಾಟ ನಡೆಸಿದ ರಿಕ್ಷಾ ಚಾಲಕ. ಈ ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದು, ಆತನ ರಿಕ್ಷಾವನ್ನು ಸಂಚಾರ ಠಾಣೆ ಪಿಎಸ್ಐ ಸುತೇಶ್ ವಶಪಡಿಸಿಕೊಂಡಿದ್ದಾರೆ.
ಕೈಕಂಬದಲ್ಲಿ ವಾಹನಗಳ ತಪಾಸಣೆ ವೇಳೆ ಮಹಮ್ಮದ್ ಅನ್ಸರ್ ಸಮವಸ್ತ್ರ ಧರಿಸಿರಲಿಲ್ಲ. ಈ ಬಗ್ಗೆ ₹ 2 ಸಾವಿರ ದಂಡ ತೆರುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆತ ರಂಪಾಟ ಮಾಡಿದ್ದ. ‘ರಿಕ್ಷಾವನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಒಡ್ಡಿ ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಆರೋಪಿ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.