ಬೆಂಗಳೂರು: ರಾಜ್ಯ ಸರ್ಕಾರದಿಂದ ಶುಕ್ರವಾರ ‘ಆರೋಗ್ಯ ಕರ್ನಾಟಕ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ‘ವಿನೂತನ ಕಾರ್ಯಕ್ರಮವನ್ನು ಸರ್ಕಾರ ಇಂದಿನಿಂದ ಚಾಲನೆ ಕೊಡುತ್ತಿದೆ. ದೇಶದ ಯಾವ ರಾಜ್ಯದಲ್ಲೂ ಈ ಮಾದರಿಯಲ್ಲಿ ಮಾಡಿಲ್ಲ. ರಾಜ್ಯದಲ್ಲಿ ಲೋಕಾರ್ಪಣೆಯಾಗುತ್ತಿರುವ ಈ ಕಾರ್ಯಕ್ರಮ ಯಾವ ರಾಜ್ಯ, ದೇಶಗಳಲ್ಲೂ ಇಲ್ಲ’ ಎಂದರು.
‘ಸಂಘಟಿತವಲ್ಲದ ರೈತರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಜನ ಸಾಮಾನ್ಯರಿಗೆ ಸುಲಭದಲ್ಲಿ ಆರೋಗ್ಯ ಸೇವೆಗಳು ದೊರೆಯುವಂತಾಗಲು ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ’ ಎಂದು ಹೇಳಿದರು.
‘ಮಾನವೀಯ ಮುಖವುಳ್ಳದ ಸೇವೆ ಅದು ಎಂದಿಗೂ ಅರ್ಥಪೂರ್ಣವಾಗಲಾರದು. ಪ್ರತಿಯೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಭಾವನೆಯನ್ನು ಆರೋಗ್ಯ ವಲಯದಲ್ಲಿ ಹೆಚ್ಚು ರೂಢಿಸಿಕೊಂಡು, ಜನರಿಗೆ ಸಹಕರಿಸಬೇಕು. ಇನ್ನುಮುಂದೆ ರಾಜ್ಯದಲ್ಲಿ ಯಾವುದೆ ಸನ್ನಿವೇಶದಲ್ಲಿ ಆಸ್ಪತ್ರೆಗಳಲ್ಲಿ ಸಾವು ಸಂಭವಿಸಿದಾಗ ಮೊದಲು ಅವರ ಶವವನ್ನು ಸಂಬಂಧಿಕರಿಗೆ ನೀಡಬೇಕು. ಆರ್ಥಿಕ ಅಥವಾ ಇನ್ನಾವುದೋ ಕಾರಣಕ್ಕೆ ಶವ ನೀಡಲು ನಿರಾಕರಿಸುವಂತಿಲ್ಲ. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.
‘ವೈದ್ಯಕೀಯ ಕ್ಷೇತ್ರ ವ್ಯಾಪಾರಿ ಕ್ಷೇತ್ರವಾಗಬಾರದು. ರೋಗಿಯ ಚಿಕಿತ್ಸೆಯನ್ನು ವೈದ್ಯರು ನಿರ್ಧರಿಸಬೇಕೇ ವಿನಃ ಆಸ್ಪತ್ರೆಗಳ ಮ್ಯಾನೇಜಿಂಗ್ ಕಮಿಟಿಗಳಲ್ಲ. ಇಂತಹಾ ನಡವಳಿಕೆಗಳನ್ನು ನಿಯಂತ್ರಿಸುವಲ್ಲಿ ನಾವು ನಿರಂತರ ಶ್ರಮಿಸುತ್ತಿದ್ದೇವೆ’ ಎಂದು ಹೇಳಿದರು.
‘ಆರೋಗ್ಯ ಕರ್ನಾಟಕ ಯೋಜನೆಯನ್ನು ಅತ್ಯಂತ ಅಲ್ಪ ಅವಧಿಯಲ್ಲಿ ಪರಿಣಾಮಕಾರಿಯಾಗಿ ರೂಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇವೆ. ಸರ್ಕಾರಿ ಆಸ್ಪತ್ರೆಗಳು ದೇವಾಲಯಗಳಂತೆ ಎಂದು ಜನತೆ ಭಾವಿಸಿ, ಯೋಜನೆಯ ಆರಂಭದ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳಿಗೆ ವಿಚಲಿತರಾಗದೆ ಜನರು ನಮ್ಮೊಂದಿಗೆ ಸಹಕರಿಸಬೇಕು ಎಂದು ಕೋರುತ್ತೇನೆ’ ಎಂದರು.
‘ಈ ಯೋಜನೆ ಯಶಸ್ವಿಯಾಗಬೇಕಾದರೆ ಜನತೆಯ ಸಹಕಾರ ಅತಿ ಮುಖ್ಯ. ಜನತೆ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು, ಉತ್ತಮ ಆರೋಗ್ಯವನ್ನು ಪಡೆಯುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ’ ಎಂದು ಸಿಎಂ ಹೇಳಿದರು.
CM @siddaramaiah launches the country’s first Universal Health Coverage programme. #ArogyaKarnataka #NammaKarnataka… https://t.co/sXTI3O9XZX
— CM of Karnataka (@CMofKarnataka) March 2, 2018
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.