ಮಂಗಳೂರು: ನಗರದ ನ್ಯೂ ಚಿತ್ರ ಜಂಕ್ಷನ್ ಬಳಿ ಡಿ. 16ರಂದು ಕರ್ತವ್ಯ ನಿರತ ಬಂದರು ಪೊಲೀಸ್ ಠಾಣೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಮಂಗಳೂರಿನಲ್ಲಿ ದೊಡ್ಡ ಮಟ್ಟದ ಗಲಭೆ ನಡೆಸಲು, ವಿಧ್ವಂಸಕಾರಿ ಕೃತ್ಯ ಮಾಡಲು ಹಲವು ಗ್ಯಾಂಗ್ ಗಳು ಸಿದ್ದತೆ ನಡೆಸಿದ್ದವು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮತ್ತೆ ಮೂವರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ. ಅರ್ಕುಳದ ಇಬ್ರಾಹಿಂ ಶಾಕಿರ್, ಸಜಿಪನಡು ಅಕ್ಬರ್ ಮತ್ತು ಕುದ್ರೋಳಿಯ ಮಹಮ್ಮದ್ ಹನೀಫ್ ಯಾನೆ ಕರ್ಚಿ ಹನೀಫ್ ಬಂಧಿತರು. ಇದರೊಂದಿಗೆ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಗುರುವಾರ ಬಂಧಿಸಿರುವ ಮೂವರು ಕಾರ್ಖಾನಾ ಗ್ಯಾಂಗ್ ಎಂಬ ಗುಂಪು ಕಟ್ಟಿಕೊಂಡಿದ್ದರು. ಈ ಹಿಂದೆ ಬಂಧಿತರಾದವರು ‘ಮಾಯಾ’ ಎಂಬ ಗ್ಯಾಂಗ್ ಕಟ್ಟಿಕೊಂಡಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದರು.