ಮುಡಿಪು: ಉಳ್ಳಾಲ ತಾಲ್ಲೂಕು ಕೇಂದ್ರದಲ್ಲಿ ಎಲ್ಲ ಇಲಾಖೆಗಳ ಕಚೇರಿಗಳನ್ನು ತೆರೆಯಬೇಕು ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಅಧಿಕಾರಿಗಳಿಗೆ ಸೂಚಿಸಿದರು.
ಅಸೈಗೋಳಿಯಲ್ಲಿ ಜರುಗಿದ ಉಳ್ಳಾಲ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಹಾಗೂ ಜನಪ್ರತಿನಿಧಿಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆಯ ‘ಭೂಮಿ’ಗೆ ಸಂಬಂಧಪಟ್ಟ ದಾಖಲೆಗಳು ವರ್ಗಾವಣೆಗೆ ತಹಶೀಲ್ದಾರರಿಗೆ ಸೂಚಿಸಲಾಯಿತು. ಇನ್ನೂ ನಡೆಯದ ಹುದ್ದೆಗಳ ಮಂಜೂರಾತಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿ, ಪಡಿತರ ಚೀಟಿ ಹಾಗೂ ಶಾಲೆ, ಅಂಗನವಾಡಿ, ನಿವೇಶನ ಮುಂತಾದ ಉದ್ದೇಶಗಳಿಗೆ ಜಮೀನು ಕಾದಿರಿಸುವ ಕುರಿತು ಚರ್ಚೆ ನಡೆಯಿತು.
ಶೀಘ್ರವೇ ತಾಲ್ಲೂಕು ಕಚೇರಿಗಳಿಗೆ ಜಮೀನು ಗುರುತಿಸಿ ಕಾದಿರಿಸುವಂತೆ ತಹಶೀಲ್ದಾರ್ ಹಾಗೂ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು. ನೋಡಲ್ ಅಧಿಕಾರಿ ನೇಮಕಕ್ಕೆ ಸಭೆ ಸಲಹೆ ನೀಡಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.
ಮುಖಂಡರಾದ ಚಂದ್ರಹಾಸ ಕರ್ಕೇರ, ಅಬ್ದುಲ್ ಜಬ್ಬಾರ್, ಸುರೇಖಾ, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯ ನಿರ್ವಾಹಕ ಅಧಿಕಾರಿ ವಿ.ನಾಗರಾಜ್ ಸ್ವಾಗತಿಸಿದರು. ತಹಶೀಲ್ದಾರ್ ಗುರುಪ್ರಸಾದ್ ವಂದಿಸಿದರು.