ಬೆಳ್ತಂಗಡಿ: ‘ಶಬರಿಮಲೆಯ ಆಚಾರ ಉಲ್ಲಂಘಿಸಲು ಪ್ರೇರೇಪಿಸಿದ ಕೇರಳದ ಕಮ್ಯುನಿಸ್ಟ್ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ಹೇರಬೇಕು’ ಎಂದು ಆಗ್ರಹಿಸಿ ಗುರುವಾರ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಘಟಕದ ಸದಸ್ಯರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
‘ದೇಗುಲದ ಪ್ರವೇಶದ ವಿಚಾರವೂ ನಂಬಿಕೆಯ ಭಾಗವಾಗಿದ್ದು, ಶಬರಿಮಲೆಯಲ್ಲಿ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಮಾತ್ರ ಪ್ರವೇಶ ನಿರ್ಬಂಧಿಸಲಾಗಿದೆ. ನ್ಯಾಯಾಲಯದ ಅನ್ಯ ತೀರ್ಪುಗಳನ್ನು ಅನುಷ್ಠಾನಗೊಳಿಸಲು ಆಸಕ್ತಿ ವಹಿಸದ ಕೇರಳ ಸರ್ಕಾರ, ಅಯ್ಯಪ್ಪ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ತೀರ್ಪಿನ ಅನುಷ್ಠಾನಕ್ಕೆ ಆಸಕ್ತಿ ವಹಿಸಿದೆ’ ಎಂದು ದೂರಿದ್ದಾರೆ.
ಅಲ್ಲಿನ ಸರ್ಕಾರದ ನಡೆಯಿಂದಾಗಿ ಕೇರಳದಲ್ಲಿ ದೊಂಬಿ, ಗಲಭೆಗಳು ನಡೆದು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಜ. 2ರಂದು ಮಹಿಳೆಯರು ಸನ್ನಿಧಾನವನ್ನು ಪ್ರವೇಶಿಸಿ, ಕೋಟ್ಯಾಂತರ ಅಯ್ಯಪ್ಪ ಭಕ್ತರ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಕೇರಳ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಶಾಸಕ ಹರೀಶ್ ಪೂಂಜ, ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ, ತಾಲ್ಲೂಕು ಕಾರ್ಯದರ್ಶಿ ನವೀನ್ ನೆರಿಯ, ಗುರುಸ್ವಾಮಿ ಸಂಘದ ಅಧ್ಯಕ್ಷ ಯುವರಾಜ ಗುರುಸ್ವಾಮಿ, ಕಾರ್ಯದರ್ಶಿ ಪ್ರಕಾಶ್ ನೆರಿಯ ಇದ್ದರು.