ಮಂಗಳೂರು: ವೈಜ್ಞಾನಿಕ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ, ಅನ್ವೇಷಣೆಗಳು ನಡೆದಿದ್ದು, ಆಧುನಿಕ ಜಗತ್ತು ಸಂಪೂರ್ಣ ನ್ಯಾನೋ ವಿಜ್ಞಾನವಾಗಿದೆ ಎಂದು ಎನ್ಐಟಿಕೆ ನಿರ್ದೇಶಕ ಪ್ರೊ.ಕರ್ಣಂ ಉಮಾಮಹೇಶ್ವರ್ ರಾವ್ ಹೇಳಿದರು.
ಸೇಂಟ್ ಅಲೋಶಿಯಸ್ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ರಸಾಯನ ವಿಜ್ಞಾನ ವಿಭಾಗದ ವತಿಯಿಂದ ಕಾಲೇಜಿನಲ್ಲಿ ಗುರುವಾರ ಅರಂಭಗೊಂಡ ‘ನ್ಯಾನೋ ತಂತ್ರಜ್ಞಾನ- 2019: ಅವಕಾಶಗಳು ಮತು ಸವಾಲುಗಳು’ ಕುರಿತಾದ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತು ಜುರಾಸಿಕ್ ಯುಗದಿಂದ ಸಾಕಷ್ಟು ಮುಂದೆ ಸಾಗಿದೆ. ಇಂದು ಯುರೇನಿಯಂ ಮತ್ತು ಚಿನ್ನ ಪ್ರಾಮುಖ್ಯತೆ ಪಡೆದಿವೆ. ಜತೆಗೆ ಈಗ ಎಲ್ಲವೂ ಅಪ್ರಸ್ತುತಗೊಳ್ಳುತ್ತಿದ್ದು, ಗುರುತ್ವಾಕರ್ಷಣ ಜಗತ್ತು, ಆವರ್ತಕ ಕೋಷ್ಟಕಗಳು ಕೂಡಾ ಬೆಲೆ ಕಳೆದುಕೊಳ್ಳುತ್ತಿವೆ ಎಂದ ಅವರು, ನ್ಯಾನೋ ತಂತ್ರಜ್ಞಾನವನ್ನು ಸರಿಯಾದ ಉದ್ದೇಶಕ್ಕಾಗಿ ಅನ್ವಯಿಸಿ, ಅದರಿಂದ ಮನುಕುಲದ ಉದ್ಧಾರವಾದರೆ ನ್ಯಾನೋ ವಿಜ್ಞಾನ ಸಾರ್ಥಕತೆ ಪಡೆಯಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೇಂಟ್ ಅಲೋಶಿಯಸ್ ಶಿಕ್ಷಣ ಸಮೂಹ ಸಂಸ್ಥೆಗಳ ನಿರ್ದೇಶಕ ರೆ. ಫಾ. ಡೈನೀಶಿಯಸ್ ವಾಜ್ ಮಾತನಾಡಿ, ‘ನಮ್ಮ ನಿತ್ಯದ ಬದುಕಿನಲ್ಲಿ ರಸಾಯನ ವಿಜ್ಞಾನ ಬೆಸೆದುಕೊಂಡಿದೆ. ಇದೇ ರೀತಿ ನ್ಯಾನೋ ಎಂಬ ಪುಟ್ಟ ತಾಂತ್ರಿಕ ಜಗತ್ತು ಮನುಕುಲಕ್ಕೆ ಒಳಿತನ್ನು ಉಂಟು ಮಾಡಲಿ ಎಂದು ಹಾರೈಸಿದರು.
ಸಮಾವೇಶದ ಸಾರಲೇಖಗಳ ಪುಸ್ತಕ ಬಿಡುಗಡೆ ಮಾಡಿದ ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್, ನ್ಯಾನೋ ಲೋಕದಲ್ಲಿರುವ ಅನೇಕ ವೈಶಿಷ್ಟ್ಯಗಳಿವೆ. ನ್ಯಾನೋ ತಂತ್ರಜ್ಞಾನದ ಮೂಲ ಚಿಂತನೆ ಆರಂಭವಾದದ್ದು ಮೈಕೆಲ್ ಫ್ಯಾರಡೆಯಿಂದ. ನ್ಯಾನೋ ಜಗತ್ತಿನಿಂದ ವಿಜ್ಞಾನಿಗಳ ಯೋಚನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿ ಆ ‘ಜ್ಞಾನ’ ಜನಸಾಮಾನ್ಯರನ್ನು ತಲುಪಿ ಜನರ ಬದುಕು ಹಸನಾಗಲಿ ಎಂದರು.
ಬೆಲ್ಜಿಯಂನ ನೆಮ್ಯೂರ್ ವಿಶ್ವವಿದ್ಯಾಲಯದ ಸಿಇಎಸ್ ನಿರ್ದೇಶಕ ಪ್ರೊ.ಜಿನೆಬ್ ಮೆಖಾಲಿಫ್ ಪ್ರಧಾನ ಭಾಷಣ ಮಾಡಿದರು. ರಸಾಯನ ವಿಜ್ಞಾನ ಸ್ನಾತಕ ವಿಭಾಗದ ಮುಖ್ಯಸ್ಥ ಪ್ರೊ.ರಾಜಗೋಪಾಲ್ ಭಟ್ ವೇದಿಕೆಯಲ್ಲಿದ್ದರು.
ಕಾಲೇಜಿನ ರಿಜಿಸ್ಟ್ರಾರ್ ಪ್ರೊ.ಎ.ಎಂ ನರಹರಿ, ಹಿರಿಯ ವಿಜ್ಞಾನಿ ರೆ. ಡಾ. ಲಿಯೋ ಡಿಸೋಜ. ಬೆಲ್ಜಿಯಂ ಮತ್ತು ಅಲ್ಜೀರಿಯಾದ ಪ್ರಾಧ್ಯಾಪಕರು, ಸಂಪನ್ಮೂಲ ವ್ಯಕ್ತಿಗಳು, ವಿಭಿನ್ನ ರಾಜ್ಯಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ಎಲ್ಸಿಆರ್ಐ ವಿಭಾಗದ ನಿರ್ದೇಶಕ ಡಾ. ರಿಚರ್ಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಸಮಾವೇಶದ ಸಂಚಾಲಕ ಡಾ. ರೊನಾಲ್ಡ್ ನಝರೆತ್ ಪರಿಚಯಿಸಿದರು. ಸಮಾವೇಶದ ಸಂಘಟನಾ ಕಾರ್ಯದರ್ಶಿ ಪ್ರೀಮಾ ಪಾಯಸ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.