ಮಂಗಳೂರು: ನಗರದ ಕಲಾಸಂಗಮ ಚಾರಿಟಬಲ್ ಟ್ರಸ್ಟ್ ಮತ್ತು ಕನ್ನಡ–ಸಂಸ್ಕೃತಿ ಇಲಾಖೆ ಆಯೋಜಿಸಿರುವ ‘ಮಾಳವಿಕಾ ಪರಿಣಯ’ ಯಕ್ಷಗಾನ ಪ್ರದರ್ಶನ ಇದೇ ತಿಂಗಳ 8ರಂದು ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿದೆ.
ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಬಡಗು ತಿಟ್ಟಿನ ಕಲಾವಿದ ಲಕ್ಷ್ಮಿನಾರಾಯಣ ಹೆಗಡೆ ಅವರನ್ನು ಸನ್ಮಾನಿಸಲಾಗುವುದು ಎಂದು ಕಲಾಸಂಗಮದ ಸುಧಾಕರ ಪೇಜಾವರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾಳಿದಾಸನ ಸಂಸ್ಕೃತ ನಾಟಕ ಮಾಳವಿಕಾಗ್ನಿಮಿತ್ರಮ್ನ ಕಥಾಭಾಗವನ್ನು ಆಧರಿಸಿ ಯಕ್ಷಗಾನ ಪ್ರಸಂಗ ಸಿದ್ಧಪಡಿಸಲಾಗಿದೆ. ಮೊದಲ ಪ್ರದರ್ಶನ ಸಿರಸಿಯಲ್ಲಿ ಕಳೆದ ವರ್ಷ ಆಗಿತ್ತು ಎಂದು ಅವರು ತಿಳಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ವೈದ್ಯ ಅಣ್ಣಯ್ಯ ಕುಲಾಲ್, ಉದ್ಯಮಿ ದಿನೇಶ್ ಪೈ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.
ಕಲಾಸಂಗಮದ ಅಧ್ಯಕ್ಷ ಕೇಶವ ಹೆಗಡೆ, ಎಸ್.ಎಸ್.ನಾಯಕ್, ಅನ್ನಪೂರ್ಣಾ ಶಾಸ್ತ್ರಿ ಮತ್ತು ಮಂಜುಳಾ ಶೆಟ್ಟಿ ಇದ್ದರು.