ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಡಿಪು- ಯಕ್ಷಗಾನ ಜಗತ್ತಿಗೆ ವಿಸ್ಮಯ ಹುಟ್ಟಿಸುವ ಕಲೆ: ಡಾ.ಜಿ.ಎಲ್‌.ಹೆಗಡೆ

ಪುರುಷೋತ್ತಮ ಪೂಂಜರ ಸಂಸ್ಮರಣೆ, ‘ಯಕ್ಷ ಪುರುಷೋತ್ತಮʼ ಸಂಸ್ಮರಣಾ ಗ್ರಂಥ ಬಿಡುಗಡೆ
Last Updated 27 ಆಗಸ್ಟ್ 2022, 14:10 IST
ಅಕ್ಷರ ಗಾತ್ರ

ಮುಡಿಪು: ಯಕ್ಷಗಾನ ಇರುವವರೆಗೂ ಕನ್ನಡ ಭಾಷೆ, ಸಂಸ್ಕೃತಿಗೆ ಯಾವುದೇ ಅಪಾಯವಿಲ್ಲ. ಯಕ್ಷಗಾನ ಸಮೂಹ ಕಲೆಯಾಗಿ, ಆರಾಧನೆ ಕಲೆಯಾಗಿ ಜಗತ್ತಿಗೆ ವಿಸ್ಮಯ ಹುಟ್ಟಿಸುವ ಕಲೆಯಾಗಿದೆ ಎಂದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್‌.ಹೆಗಡೆ ಕುಮಟಾ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ಅಂಬುರುಹ ಯಕ್ಷ ಸದನ ಪ್ರತಿಷ್ಠಾನ ಬೊಟ್ಟಿಕೆರೆ, ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರಗಳ ಸಹಯೋಗದೊಂದಿಗೆ ಶನಿವಾರ ನಡೆದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾ ಕಾರ್ಯಕ್ರಮ ದಲ್ಲಿ ‘ಯಕ್ಷ ಪುರುಷೋತ್ತಮʼ ಸಂಸ್ಮರಣಾ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಪೂಂಜರಿಗೆ ಭಾಗವತನಿಗೆ ಇರಬೇಕಾದ ಸಾಹಿತ್ಯ ಪರಿಜ್ಞಾನ ಮತ್ತು ಹಿಡಿತ ಅದ್ಭುತವಾಗಿತ್ತು. ಪೂಂಜರು ಶಿಷ್ಯರ ಮೂಲಕ ಯಕ್ಷ ಪರಂಪರೆಯನ್ನು ಮುಂದುವರಿಸಿದ್ದಾರೆ’ ಎಂದರು.

ಕಲಾವಿದ ವಿಶ್ವೇಶ್ವರ ಭಟ್‌ ಸುಣ್ಣಂಬಳ ಮಾತನಾಡಿ, ‘ಪೂಂಜರು ಅಪಾರ ಜ್ಞಾನಿಯಾಗಿದ್ದರೂ ನೆನಪಾಗದ್ದನ್ನು ನಿಸ್ಸಂಕೋಚವಾಗಿ ಕೇಳುತ್ತಿದ್ದರು, ಚರ್ಚಿಸುತ್ತಿದ್ದರು. ಕಲಾವಿದನ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಅರ್ಥಗಾರಿಕೆ ಇರುತ್ತಿತ್ತು. ಹೊಸ ಪದ್ಯಗಳನ್ನು ಹೊಸೆದು ಹಾಡುತ್ತಿದ್ದರು. ಅವರ ಸಾಹಿತ್ಯಪೂರ್ಣ ಪ್ರಸಂಗಗಳು ಹಿರಿಯ ಭಾಗವತರ ಮೆಚ್ಚುಗೆ ಗಳಿಸಿಕೊಂಡಿವೆ’ ಎಂದರು.

ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಜೋಶಿ ಮಾತನಾಡಿ, ‘ಪುರುಷೋತ್ತಮ ಪೂಂಜರ ಸರ್ವಾಂಗ ಪ್ರತಿಭೆಗೆ ಮಾರುಹೋದ ರಸಿಕ ನಾನು. ಅವರು ಯಕ್ಷಗಾನದ ದಶಾವತಾರಿ, ಶ್ರೇಷ್ಠ ಯಕ್ಷ ಕವಿಗಳಲ್ಲಿ ಒಬ್ಬರು, ಅಸಾಧಾರಣ ಕಲಾವಿದ ಮತ್ತು ಯಕ್ಷಗಾನ ಗುರು. ಯಕ್ಷಗಾನ ತುಳು ಪ್ರಸಂಗಗಳಲ್ಲೂ ಗಾಂಭೀರ್ಯತೆ ಉಳಿಸಿಕೊಂಡ ವಿರಳರಲ್ಲಿ ಒಬ್ಬರು’ ಎಂದು ಶ್ಲಾಘಿಸಿದರು.

ಸಂಸ್ಮರಣಾ ಗ್ರಂಥದ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ‘ಪುರುಷೋತ್ತಮ ಪೂಂಜರ ಸಂಸ್ಮರಣಾ ಗ್ರಂಥ ವ್ಯಕ್ತಿ ಪೂಜೆಯಲ್ಲ, ಕಲೆಯ ಬಗ್ಗೆ ಆಸಕ್ತರು ಓದಲು ಒಂದು ಆಕರ ಗ್ರಂಥ. ಇದರಲ್ಲಿ ಪೂಂಜ ಅವರೇ ಬರೆದ ಲೇಖನಗಳೂ ಸೇರಿವೆ. ಅಭಿನಂದನಾ ಗ್ರಂಥ ಸಂಸ್ಮರಣಾ ಗ್ರಂಥವಾಗಿರುವುದು ವಿಪರ್ಯಾಸ’ ಎಂದರು.

ಪ್ರಕಾಶಕ ಅಜೆಕಾರು ಬಾಲಕೃಷ್ಣ ಶೆಟ್ಟಿ, ಗ್ರಂಥವನ್ನು ಸಿದ್ಧಪಡಿಸುವಲ್ಲಿ ಸಹಕರಿಸಿದ ಪೂಂಜರ ಕುಟುಂಬ, ಅಭಿಮಾನಿಗಳು ಮತ್ತು ಶಿಷ್ಯರನ್ನು ನೆನೆದರು.

ಮಂಗಳೂರು ವಿವಿಯ ಪ್ರಸಾರಾಂಗ, ಕಲಾಗಂಗೋತ್ರಿ ಹಾಗೂ ಗೋಪಾಲಕೃಷ್ಣ ಯಕ್ಷಗಾನ ಸಂಘದ ಪ್ರತಿನಿಧಿಗಳನ್ನು, ‘ಆಕೃತಿ ಪ್ರಕಾಶನʼದ ಕಲ್ಲೂರು ನಾಗೇಶ್‌, ಯಕ್ಷ ಪುರುಷೋತ್ತಮ ಕೃತಿಯ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ, ಪ್ರಕಾಶಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಂಬುರುಹ ಯಕ್ಷ ಸದನ ಪ್ರತಿಷ್ಠಾನದ ಲಾಂಛನ ಬಿಡುಗಡೆ ಮಾಡಲಾಯಿತು.

ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ, ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಶ್ರೀಪತಿ ಕಲ್ಲೂರಾಯ, ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನದ ಅರ್ಚಕ ಟಿ. ಸುಬ್ರಹ್ಮಣ್ಯ ಭಟ್, ಪ್ರತಿಷ್ಠಾನದ ಅಧ್ಯಕ್ಷೆ ಶೋಭಾ ಪುರುಷೋತ್ತಮ ಪೂಂಜ, ಉಪಾಧ್ಯಕ್ಷ ರಾಜಾರಾಂ ಹೊಳ್ಳ ಉಪಸ್ಥಿತರಿದ್ದರು.

ಸುನಿಲ್ ಪಲ್ಲಮಜಲು ಹಾಗೂ ಸದಾಶಿವ ಆಳ್ವ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ದೀವಿತ್ ಕೊಟ್ಯಾನ್ ವಂದಿಸಿದರು. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಯಕ್ಷಗಾನ ಪ್ರಸಂಗ ‘ಮಾನಿಷಾದʼವನ್ನು ಕಲಾವಿದರು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT