ದಾವಣಗೆರೆ:ಕೊರೊನಾ ರೋಗದಿಂದ ತಂದೆ-ತಾಯಿಗಳನ್ನು ಕಳೆದುಕೊಂಡ ಮಕ್ಕಳಿಗೆ ಲಯನ್ಸ್ ಕ್ಲಬ್ ದಾವಣಗೆರೆ ನೆರವಿಗೆ ಮುಂದಾಗಿದೆ.
‘ಅಶಕ್ತ ಮಕ್ಕಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ₹2 ಲಕ್ಷ ದೇಣಿಗೆ ನೀಡಿದ್ದೇನೆ. ಅರ್ಜಿಗಳು ಬಂದ ಬಳಿಕ ಅವುಗಳನ್ನು ವಿಂಗಡಿಸಿ ಆ ಮಕ್ಕಳಿಗೆ ಭದ್ರತಾ ಠೇವಣಿ ಇರಿಸಲಾಗುವುದು. ಜೂನ್ 21ರಂದು ಭದ್ರತಾ ಠೇವಣಿಗಳ ಬಾಂಡ್ ಅನ್ನು ನೀಡಲಾಗುವುದು’ ಎಂದು ಲಯನ್ಸ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎಸ್. ನಾಗಪ್ರಕಾಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘18 ವರ್ಷಗಳ ಬಳಿಕ ಬಾಂಡ್ನ ಅವಧಿ ಪೂರ್ಣಗೊಂಡ ಬಳಿಕ ಆ ಮಕ್ಕಳಿಗೆ ಒಂದಷ್ಟು ಹಣ ಸಿಗಲಿದ್ದು. ವಿದ್ಯಾಭ್ಯಾಸ, ಮದುವೆ ಇಲ್ಲವೇ ಸ್ವ–ಉದ್ಯೋಗ ಮಾಡಬಹುದು. ಒಮ್ಮೆ ಭದ್ರತಾ ಠೇವಣಿ ಇರಿಸಿದರೆ ಯಾವುದೇ ಕಾರಣಕ್ಕೂ ಅದನ್ನು ತೆಗೆದುಕೊಳ್ಳುವಂತಿಲ್ಲ. ಅರ್ಜಿ ಸಲ್ಲಿಸಲು ಜೂನ್ 18 ಕಡೆಯ ದಿನಾಂಕವಾಗಿದೆ’ ಎಂದು ಹೇಳಿದರು.
‘ಕೋವಿಡ್ನಿಂದಾಗಿ ತಂದೆ–ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ 1ರಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸಕ್ಕೆ ಶಾಲೆಯ ಶುಲ್ಕ, ಪುಸ್ತಕ, ಸಮವಸ್ತ್ರಕ್ಕೆ ನೆರವು ನೀಡಲಾಗುವುದು’ ಎಂದರು.
‘ಅರ್ಜಿ ಸಲ್ಲಿಸುವ ಮಕ್ಕಳು ತಂದೆ–ತಾಯಿ ಮರಣಪತ್ರ, ಕೋವಿಡ್ ಪಾಸಿಟಿವ್ ರಿಪೋರ್ಟ್, ಆಧಾರ್ ಕಾರ್ಡ್, ವಿಳಾಸ ಹಾಗೂ ಓದುತ್ತಿರುವ ಶಾಲೆಯ ವಿವರ ನೀಡಬೇಕು ’ ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ ‘ಕ್ಲಬ್ನಲ್ಲಿ 95 ಸದಸ್ಯರಿದ್ದು, ಬಡ ಕುಟುಂಬಗಳಿಗೆ ಕಿಟ್ ನೀಡುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದೇವೆ’ ಎಂದರು.
ಲಯನ್ಸ್ ಕ್ಲಬ್ನ ಎನ್.ವಿ. ಬಂಡಿವಾಡ್, ವೈ.ಬಿ. ಸತೀಶ್, ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಆಸಕ್ತರು ಮೊಬೈಲ್ ಸಂಖ್ಯೆ: 9844063504, 9448043560 ಸಂಪರ್ಕಿಸಬಹುದು.