ದಾವಣಗೆರೆ: ಗುರುತಿನ ಚೀಟಿ ಮತ್ತು ಪುನರ್ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಒಟ್ಟು 380 ಮ್ಯಾನುವೆಲ್ ಸ್ಕ್ಯಾವೆಂಜರ್ಸ್ಗಳ ಅಂತಿಮ ಪಟ್ಟಿಯನ್ನು ದೆಹಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮಕ್ಕೆ ಕಳುಹಿಸಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅನುಮೋದನೆ ನೀಡಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ವಿಶೇಷ ಮರುಸಮೀಕ್ಷೆ ನಡೆಸಿ ಅಂತಿಮಗೊಳಿಸಲಾಗಿತ್ತು. ಈ ಬಗ್ಗೆ ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಸಲ್ಲಿಸಲಾಗುವ ಎಲ್ಲ ಫಲಾನುಭವಿಗಳ ವಿವರಗಳನ್ನು ನಿಗಮದಲ್ಲಿ ಡಾಟಾ ಎಂಟ್ರಿ ಮಾಡಲಾಗುವುದು. ಒಂದು ತಿಂಗಳ ಒಳಗಾಗಿ ಅನುಮೋದಿತ ಪಟ್ಟಿಯ ಫಲಾನುಭವಿಗಳಿಗೆ ಆಯಾ ನಗರ ಸ್ಥಳೀಯ ಸಂಸ್ಥೆಗಳು ಗುರುತಿನ ಚೀಟಿ ನೀಡಲು ನಿಗಮ ಸೂಚಿಸಲಿದೆ. ಹಾಗೂ ಪ್ರತಿ ಫಲಾನುಭವಿಗಳಿಗೆ ಒಂದು ಬಾರಿ ₹ 40 ಸಾವಿರ ನೆರವು ನೀಡಲಾಗುತ್ತದೆ. ನಂತರ ಅವರಿಗೆ ಪುನರ್ವಸತಿ ಸೌಲಭ್ಯಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಕಲ್ಪಿಸಬೇಕಾಗುತ್ತದೆ ಎಂದರು.
ಸ್ವಯಂ ಉದ್ಯೋಗ ಮಾಡಬಯಸುವ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಹಾಗೂ ಸಬ್ಸಿಡಿ ರೂಪದಲ್ಲಿ ನೆರವು ನೀಡಬೇಕಾಗುತ್ತದೆ. ಬ್ಯಾಂಕ್ ಸಾಲ ಸೌಲಭ್ಯಗಳನ್ನು ನೀಡುವ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್ರವರಿಗೆ ಸೂಚಿಸಲಾಗುವುದು ಎಂದರು.
ಪಾಲಿಕೆ, ಹರಿಹರ ನಗರಸಭೆ, ಚನ್ನಗಿರಿ, ಮಲೇಬೆನ್ನೂರು, ಹೊನ್ನಾಳಿ ಮತ್ತು ಜಗಳೂರು ಪಟ್ಟಣ ಪಂಚಾಯಿತಿಗಳಲ್ಲಿ ಸಮೀಕ್ಷೆ ಕ್ಯಾಂಪ್ ನಡೆಸಿ, ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಜಿಲ್ಲಾ ನೋಡಲ್ ಅಧಿಕಾರಿ ಬಾಬುಲಾಲ್ ಸ್ಥಳ ಪರಿಶೀಲನೆ ನಡೆಸಿ ಅರ್ಜಿಗಳನ್ನು ಅಂತಿಮಗೊಳಿಸಿದ್ದಾರೆ ಎಂದು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಜಿ. ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ, ಪಾಲಿಕೆ ಉಪ ಆಯುಕ್ತ ಗದಗೀಶ್ ಸಿರ್ಸಿ, ಡಿಎಚ್ಒ ರಾಘವೇಂದ್ರಸ್ವಾಮಿ, ಚನ್ನಗಿರಿ ಮತ್ತು ಮಲೆಬೆನ್ನೂರು ಪುರಸಭೆ, ಹೊನ್ನಾಳಿ ಮತ್ತು ಜಗಳೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ಶಂಕರ್, ವಾಸುದೇವ, ಮಂಜಮ್ಮ, ಬಸವರಾಜ್ ಅವರೂ ಇದ್ದರು.
ಅಂಕಿ ಅಂಶಗಳು
ಸಂಸ್ಥೆಗಳು ಬಂದ ಅರ್ಜಿ ಸ್ವೀಕೃತ ತಿರಸ್ಕೃತ
ದಾವಣಗೆರೆ ಮಹಾನಗರ ಪಾಲಿಕೆ 346 245 101
ಹರಿಹರ ನಗರಸಭೆ 86 78 8
ಚನ್ನಗಿರಿ ಪುರಸಭೆ 49 41 8
ಮಲೆಬೆನ್ನೂರು ಪುರಸಭೆ 3 3 0
ಜಗಳೂರು ಪಟ್ಟಣ ಪಂಚಾಯ್ತಿ 13 13 0
ಒಟ್ಟು 497 380 117
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.