ಹರಪನಹಳ್ಳಿ: ಶ್ರಾವಣ ಮಾಸದ ಕೊನೆ ದಿನವಾದ ಶನಿವಾರ ತಾಲ್ಲೂಕಿನ ಸುಕ್ಷೇತ್ರ ಚಿಗಟೇರಿ ನಾರದಮುನಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆದರು.
ಮಧ್ಯ ಕರ್ನಾಟಕದಲ್ಲಿ ಅಪಾರ ಭಕ್ತರನ್ನು ಹೊಂದಿರುವ ಚಿಗಟೇರಿಗೆ ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಗದಗ ಜಿಲ್ಲೆಗಳು ಸೇರಿ ವಿವಿಧೆಡೆಯಿಂದ ಭಕ್ತರ ದಂಡು ಬಂದಿತ್ತು. ಬೆಳಿಗ್ಗೆಯಿಂದಲೆ ಭಕ್ತರು ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೀಡ್ ನಮಸ್ಕಾರ ಹಾಕಿದರು.
ದೇವರಿಗೆ ಅಭಿಷೇಕ, ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಶಿವನಾರದ ಮುನಿ ಗೋವಿಂದ ಗೋವಿಂದ ಎಂದು ಭಕ್ತರು ಘೋಷಣೆ ಕೂಗಿದರು. ಬಂದ ಭಕ್ತರಿಗೆಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಸ್ಥಾನ ಸಮಿತಿಯ ಷಡಕ್ಷರಪ್ಪ, ಈಶ್ವರಪ್ಪ, ರಾಜಶೇಖರಗೌಡ, ದ್ಯಾಮನಗೌಡ, ಬಳಗನೂರು ಸಿ. ರಾಮನಗೌಡ, ಜಯ್ಯಣ್ಣ, ಕೆ. ಚನ್ನಬಸವನಗೌಡ, ಜಾತಪ್ಪ, ಬಸಲಿಂಗಪ್ಪ, ಕೆ.ನಾಗಪ್ಪ ನೇತೃತ್ವ ವಹಿಸಿದ್ದರು.