ದಾವಣಗೆರೆ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಇಲ್ಲಿನ ಅಮರ್ ಜವಾನ್ ಸ್ಮಾರಕ ಉದ್ಯಾನದ ಎದುರು ಪ್ರತಿಭಟನೆ ನಡೆಸಿದರು.
ಬಿಜೆಪಿ ಸರ್ಕಾರ ದೇಶದ ಸೇವಾ ಭದ್ರತೆ ಕಿತ್ತುಕೊಂಡು ನಿರುದ್ಯೋಗ ಹೆಚ್ಚು ಮಾಡಿದೆ. ದೇಶದ ಭದ್ರತೆಗೆ ಧಕ್ಕೆ ತಂದಿದೆ ಕಾರ್ಯಕರ್ತರು ಘೋಷಣೆ ಕೂಗಿದರು.
‘ಅಗ್ನಿಪಥ ಯೋಜನೆಯಡಿ ನಾಲ್ಕು ವರ್ಷಗಳಿಗೆ ಮಾತ್ರ ಉದ್ಯೋಗ ನೀಡುವುದರಿಂದ ಯುವಕರಿಗೆ ಇತ್ತ ವಿದ್ಯಾಭ್ಯಾಸವೂ ಮುಂದುವರಿಯುವುದಿಲ್ಲ. ಅತ್ತ ಸಾಂಸಾರಿಕ ಜೀವನವೂ ಇಲ್ಲದಂತಾಗುತ್ತದೆ. ನಾಲ್ಕು ವರ್ಷಗಳ ನಂತರ ಅವರು ಎಲ್ಲಿ ಹೋಗಬೇಕು?’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಯಸಿಂಹ ಪ್ರಶ್ನಿಸಿದರು.
‘ಅಗ್ನಿಪಥ ಯೋಜನೆ ದೇಶದ ಯುವಕರನ್ನು ಬೆಂಕಿಗೆ ತಳ್ಳಿದೆ. ಯುವಕರನ್ನು ನಾಲ್ಕು ವರ್ಷ ಸೇನೆಯಲ್ಲಿ ದುಡಿಸಿಕೊಂಡು ಬಳಸಿ ಬಿಸಾಡುವ ರೀತಿಯಲ್ಲಿ ಅವರನ್ನು ಹೊರ ಹಾಕಲಾಗುತ್ತದೆ. ಇದರಿಂದ ಯುವಕರ ಭವಿಷ್ಯ ಹಾಳಾಗುತ್ತದೆ’ ಎಂದು ಕಾಂಗ್ರೆಸ್ ಮಹಿಳಾ ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಪಾಟೀಲ್ ದೂರಿದರು.
‘ಕಾಂಗ್ರೆಸ್ ದೇಶ ಕಟ್ಟುವ ಕೆಲಸ ಮಾಡಿದರೆ, ಬಿಜೆಪಿ ದೇಶ ಹಾಳು ಮಾಡುವ ಕೆಲಸ ಮಾಡುತ್ತಿದೆ’ ಎಂದು ಮುಖಂಡ ಸೈಯ್ಯದ್ ಸೈಫುಲ್ಲಾ ಟೀಕಿಸಿದರು.
ಕಾಂಗ್ರೆಸ್ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಗಡಿಗುಡಾಳ್ ಮಂಜುನಾಥ್, ಎ.ನಾಗರಾಜ್, ಮುದೇಗೌಡ್ರ ಗಿರೀಶ್, ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಮಲ್ಲಿಕಾರ್ಜುನ್ ಎಸ್., ಸೈಯ್ಯದ್ ಚಾರ್ಲಿ, ಅಲಿ ರಹಮತ್, ಬಿ.ಎಂ. ಈಶ್ವರ್, ಲಾಲಾ ಅರೀಫ್, ಖಾಲಿದ್, ಶುಭಮಂಗಳ, ರುದ್ರಮ್ಮ, ರಾಧಾಬಾಯಿ ಪಾಲ್ಗೊಂಡಿದ್ದರು.